ಬೆಳ್ತಂಗಡಿ: ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣ: ಪತ್ನಿಯ ಕತ್ತು ಹಿಸುಕಿ ಬಾವಿಗೆ ಎಸೆದ ಪತಿ
ಬೆಳ್ತಂಗಡಿ: ಬೆಳಾಲು ಗ್ರಾಮದ ಮಾಚಾರಿನ ಕೆಂಚನೊಟ್ಟು ಎಂಬಲ್ಲಿ ವಿವಾಹಿತ ಮಹಿಳೆಯ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಪತಿಯೇ ಕೊಲೆಗೈದು ಬಾವಿಗೆ ತಳ್ಳಿರುವ ವಿಚಾರ ದೃಢಪಟ್ಟಿದೆ.
ಮಾಚಾರು ಕೆಂಪನೊಟ್ಟು ನಿವಾಸಿ ಶಶಿಕಲಾ ಮೃತಪಟ್ಟ ಮಹಿಳೆಯಾಗಿದ್ದು, ಶಶಿಕಲಾ ಪತಿ ಸುಧಾಕರ ನಾಯ್ಕ ನನ್ನು ಬಂಧಿಸಲಾಗಿದ್ದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಶಶಿಕಲಾ ಮತ್ತು ಸುಧಾಕರ್ ಕಳೆದ 7 ವರ್ಷಗಳ ಹಿಂದೆ ಪ್ರೀತಿ ಮಾಡಿ ಮದುವೆಯಾಗಿದ್ದರು. ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ 6 ವರ್ಷದ ಮಗಳು ಕೂಡ ಇದ್ದಾಳೆ. ಆದರೆ, ಸುಧಾಕರ್ಗೆ ಬೇರೊಂದು ಯುವತಿಯ ಜೊತೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು.
ಅಲ್ಲದೆ, ನಿನ್ನೆ ಕೂಡ ಜಗಳ ನಡೆದಿದೆ. ಇದು ತಾರಕಕ್ಕೇರಿ ಸುಧಾಕರ್, ಪತ್ನಿ ಶಶಿಕಲಾಳ ಕುತ್ತಿಗೆ ಹಿಸುಕಿದ್ದಾನೆ. ಪರಿಣಾಮ ಆಕೆ ಪ್ರಜ್ಞೆ ತಪ್ಪಿ ಕೆಳಗೆ ಬಿದಿದ್ದಾಳೆ. ಬಳಿಕ ಹೆಂಡತಿಯನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದಾನೆ.





