ಆಂಧ್ರ ಪ್ರದೇಶದಲ್ಲಿ ಮತ್ತೆ ರೈಲು ದುರಂತ: ಎರಡು ರೈಲುಗಳ ನಡುವೆ ಡಿಕ್ಕಿ-ಮೂವರು ಮೃತ್ಯು
ವಿಶಾಖಪಟ್ಟಣಂ : ಆಂಧ್ರ ಪ್ರದೇಶದಲ್ಲಿ ಭಾನುವಾರ ಸಂಜೆ ರೈಲು ಅವಘಡ ಸಂಭವಿಸಿದ್ದು, ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲು ಮತ್ತು ವಿಶಾಖಪಟ್ಟಣಂ-ರಗಡ ಪ್ಯಾಸೆಂಜರ್ ರೈಲಿನ ನಡುವೆ ಹಿಂಬದಿ ಢಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಅಪಘಾತದಲ್ಲಿ 3 ಕೋಚ್ಗಳು ಹಳಿ ತಪ್ಪಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ, ಸಹಾಯ ಮತ್ತು ಆಂಬ್ಯುಲೆನ್ಸ್ಗಾಗಿ ಸ್ಥಳೀಯ ಆಡಳಿತ ಮತ್ತು ಎನ್ಡಿಆರ್ಎಫ್ಗೆ ತಿಳಿಸಲಾಗಿದೆ. ಅಪಘಾತ ಪರಿಹಾರಕ್ಕಾಗಿ ತಂಡಗಳು ರೈಲುಗಳ ಸ್ಥಳಕ್ಕೆ ತಲುಪಿವೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ತತ್ ಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮತ್ತು ವಿಜಯನಗರದ ಹತ್ತಿರದ ಜಿಲ್ಲೆಗಳಾದ ವಿಶಾಖಪಟ್ಟಣಂ ಮತ್ತು ಅನಕಾಪಲ್ಲಿಯಿಂದ ಸಾಧ್ಯವಾದಷ್ಟು ಆಂಬ್ಯುಲೆನ್ಸ್ಗಳನ್ನು ಕಳುಹಿಸಲು, ಉತ್ತಮ ವೈದ್ಯಕೀಯ ಸೇವೆಯನ್ನು ಒದಗಿಸಲು ಹತ್ತಿರದ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲು ಆದೇಶಿಸಿದ್ದಾರೆ.





