ಕಾರಿಗೆ ಬೆಂಕಿ: ತಾಯಿ, ಮಗು ಸಜೀವ ದಹನ
ಬೆಂಗಳೂರು: ಲಾರಿ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿಗೆ ಬೆಂಕಿ ಬಿದ್ದ ಪರಿಣಾಮ ತಾಯಿ, ಮಗು ಸಜೀವ ದಹವಾಗಿರುವ ಘಟನೆ ಬೆಂಗಳೂರಿನ ಸೋಂಪುರ ಬಳಿಯ ನೈಸ್ ರಸ್ತೆಯಲ್ಲಿ ನಡೆದಿದೆ.
ಕಾರೊಂದು ಮೈಸೂರು ಕಡೆಯಿಂದ ಕನಕಪುರಕ್ಕೆ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಲಾರಿಗೆ ಢಿಕ್ಕಿ ಹೊಡೆದು ಮೋರಿಯ ಗೋಡೆಗೆ ಗುದ್ದಿದೆ. ಇದರ ಪರಿಣಾಮ ಕಾರು ಹೊತ್ತಿಕೊಂಡು ಅದರಲ್ಲಿದ್ದ ತಾಯಿ ಹಾಗೂ ಮಗು ಸಜೀವ ದಹನವಾಗಿದ್ದಾರೆ. ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳಿದ್ದರು. ದಂಪತಿಯನ್ನು ಮಹೇಂದ್ರನ್ ಮತ್ತು ಸಿಂಧು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದವರು ಮೂಲತಃ ತಮಿಳುನಾಡಿನ ಸೇಲಂ ಮೂಲದ ಮಹೇಂದ್ರನ್ ಕುಟುಂಬ ರಾಮಮೂರ್ತಿ ನಗರದ ವಿಜಿನಾಪುರ ನಿವಾಸಿಗಳಾಗಿದ್ದರು ಎಂದು ತಿಳಿದುಬಂದಿದೆ. ಗಾಯಾಳು ಮಹೇಂದ್ರ ಹಾಗೂ ಇನ್ನೊಂದು ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿದ್ದು, ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.




