ವಿಟ್ಲ: ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ: ಎ.ಐ.ಸಿ.ಸಿ.ಟಿ.ಯು. ಮುಖಂಡ ರಾಮಣ್ಣ ವಿಟ್ಲ
ವಿಟ್ಲ: ಸೂಕ್ತ ಮೂಲಭೂತ ಸೌಕರ್ಯವಿಲ್ಲದೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಿಂದ ರೋಗಿಗಳು ಬೇರೆ ಕಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರಾತ್ರಿ ಸಮಯದಲ್ಲಿ ಬರುವ ಬಡರೋಗಿಗಳಿಗೆ ಅಗತ್ಯ ಸೇವೆಗಳು ವಿಟ್ಲದಲ್ಲೇ ಲಭಿಸುವಂತಾಗಬೇಕೆಂದು ಜಿಲ್ಲಾಧಿಕಾರಿ, ಪುತ್ತೂರು ಶಾಸಕರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಗತ್ಯ ವ್ಯವಸ್ಥೆಯನ್ನು ತಿಂಗಳಲ್ಲಿ ಕಲ್ಪಿಸದೇ ಹೋದಲ್ಲಿ ನ.೬ರಂದು ಆರೋಗ್ಯ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎ.ಐ.ಸಿ.ಸಿ.ಟಿ.ಯು. ಮುಖಂಡ ರಾಮಣ್ಣ ವಿಟ್ಲ ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಟ್ಲ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರ ಕೊರತೆ ಇದೆ. ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ಪುತ್ತೂರು, ಮಂಗಳೂರು ಭಾಗಕ್ಕೆ ವರ್ಗಾವಣೆ ಮಾಡುತ್ತಿದ್ದು, ಬಡ ಗರ್ಬಿಣಿ ಮಹಿಳೆಯರು ಪರದಾಡುವಂತಾಗುತ್ತಿದೆ. ಆಸ್ಪತ್ರೆಗೆ ಅಗತ್ಯ ವೈದ್ಯರನ್ನು ನೇಮಿಸಿ, ಸಿಸೇರಿಯನ್ ಸೇರಿ ಹೆರಿಗೆಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸಬೇಕು. ಇಲ್ಲದೇ ಹೋದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳಕ್ಕೆ ಶಾಸಕರು, ಜಿಲ್ಲಾ ಆರೋಗ್ಯಾಧಿಕಾರಿ ಬೇಟಿ ನೀಡಿ ಪರಿಹಾರ ಸೂಚಿಸುವ ತನಕ ಸ್ಥಳದಿಂದ ಏಳುವುದಿಲ್ಲ ಎಂದು ತಿಳಿಸಿದರು.
ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು, ಚಂದ್ರಶೇಖರ ಯು., ಗಣೇಶ್ ಸೀಗೆಬಲ್ಲೆ, ಕಿದ್ಮನ್ ಪೌಂಡೇಶನ್ ವಿಟ್ಲ ವಲಯದ ಅಧ್ಯಕ್ಷ ಕೆ.ಎ ಹಮೀದ್ ಕೊಡಂಗಾಯಿ ಉಪಸ್ಥಿತರಿದ್ದರು.




