ವಿಟ್ಲ: 400 ಕೆ.ವಿ ವಿದ್ಯುತ್ ಮಾರ್ಗ ಖಂಡಿಸಿ ರೈತರಿಂದ ನಾಡಕಚೇರಿ ಚಲೋ ಸತ್ಯಾಗ್ರಹ:
ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಪಟ್ಟು ಹಿಡಿದ ರೈತರು
ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ವಿಟ್ಲ ರೈತ ಹೋರಾಟ ಸಂಘ ನೇತೃತ್ವದಲ್ಲಿ 400 ಕೆ.ವಿ. ಉಡುಪಿ – ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ವಿರೋಧಿಸಿ ವಿಟ್ಲ ಜೈನ ಬಸದಿಯಿಂದ ನಾಡಕಛೇರಿ ಚಲೋ ಸತ್ಯಾಗ್ರಹ ನಡೆಯಿತು.
ಜೈನ ಬಸದಿಯಿಂದ ಹೊರಟ ಮೆರವಣಿಗೆ ವಿಟ್ಲ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದೆ. ನಾಡಕಚೇರಿಯಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಇತ್ತ ಪ್ರತಿಭಟನೆ ನಡೆಯುತ್ತಿದ್ದರೂ ಪುಚ್ಚೆಗುತ್ತು ಎಂಬಲ್ಲಿ ಅಧಿಕಾರಿಗಳು ಸರ್ವೇ ಕಾರ್ಯ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಹೋರಾಟಗಾರರು ರಸ್ತೆಯಲ್ಲಿ ಕುಳಿತು ತಕ್ಷಣವೇ ಸರ್ವೇ ಕಾರ್ಯ ನಿಲ್ಲಿಸುವಂತೆ ಪಟ್ಟು ಹಿಡಿದರು. ಬಳಿಕ ಪೊಲೀಸರು ಭರವಸೆ ನೀಡಿದ ಬಳಿಕ ರಸ್ತೆಯಲ್ಲಿ ಕುಳಿತವರು ತೆರಳಿ ನಾಡಕಚೇರಿ ಬಳಿ ಧರಣಿ ಕುಳಿತರು. ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸುತ್ತಮುತ್ತಲಿನ ನೂರಾರು ಸಂತ್ರಸ್ತ ರೈತರು ಭಾಗವಹಿಸಿದ್ದಾರೆ.






