ಪುತ್ತೂರು: ಮೆಸ್ಕಾಂ ನೌಕರರ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
ಪುತ್ತೂರು: ಆಡುಗಳು ಮೆಸ್ಕಾಂ ಕಚೇರಿ ಆವರಣಕ್ಕೆ ಹೂಗಿಡಗಳನ್ನು ತಿಂದಿರುವುದಾಗಿ ತಗಾದೆ ತೆಗೆದು ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವ ಆರೋಪ ಹೊತ್ತಿರುವ ಮೆಸ್ಕಾಂ ನೌಕರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಉಪ್ಪಿನಂಗಡಿ ಪೊಲೀಸರಿಗೆ ಆದೇಶಿಸಿದ್ದು, ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ ಗ್ರಾಮದ ಲಕ್ಷ್ಮೀನಗರದ ಮೆಸ್ಕಾಂ ಕಚೇರಿಯ ಬಳಿ ಆಡು ಮೇಯಿಸುತ್ತಿದ್ದ ಪರಾರಿ ನಿವಾಸಿ ಪಿ.ಇಸುಬು(೬೫ವ.) ಎಂಬವರು ಆಡು ಮೇಯಿಸುತ್ತಿದ್ದಾಗ ಆಡುಗಳು ಮೆಸ್ಕಾಂ ಕಚೇರಿಯ ಆವರಣಕ್ಕೆ ಹೋಗಿ ಹೂ ಗಿಡಗಳನ್ನು ತಿಂದಿರುವುದಾಗಿ ತಗಾದೆ ತೆಗೆದ ಉಪ್ಪಿನಂಗಡಿ ಮೆಸ್ಕಾಂ ನೌಕರರಾದ ವಿತೇಶ್ ಶೆಟ್ಟಿ, ಸತೀಶ, ಭವಿತ್, ಭೀಮಣ್ಣ ಗೌಡ, ಹನುಮಂತ, ರಂಜಿತ್ ಮತ್ತು ಇತರರು ಸೇರಿಕೊಂಡು ಪಿ.ಇಸುಬು ಅವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪ ವ್ಯಕ್ತವಾಗಿತ್ತು.
ಇಸುಬು ಅವರು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಂತರ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕೇಸು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆರೋಪಿಗಳಾದ ಉಪ್ಪಿನಂಗಡಿ ಮೆಸ್ಕಾಂ ನೌಕರರಾದ ವಿತೇಶ್ ಶೆಟ್ಟಿ, ಸತೀಶ, ಭವಿತ್, ಭೀಮಣ್ಣ ಗೌಡ, ಹನುಮಂತ, ರಂಜಿತ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.
ಅದರಂತೆ ಉಪ್ಪಿನಂಗಡಿ ಠಾಣೆಯ ಪೊಲೀಸರು ಪ್ರಥಮ ವರ್ತಮಾನ ವರದಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ದೂರುದಾರರ ಪರವಾಗಿ ನ್ಯಾಯವಾದಿ ಇಬ್ರಾಹಿಂ ಬಾತಿಷಾ ಯು.ಕೆ.ವಾದಿಸಿದ್ದರು.




