ಪ್ರಿಯಕರನ ಜೊತೆಗೂಡಿ ಪತಿಯ ಕೊಲೆ: ಪತ್ನಿ ಸೇರಿ ಐವರು ಆರೋಪಿಗಳ ಬಂಧನ
ಬೆಂಗಳೂರು: ಪ್ರಿಯಕರನ ಜೊತೆಗೂಡಿ ಗಂಡನನ್ನು ಕೊಲೆ ಮಾಡಿಸಿದ್ದ ಹೆಂಡತಿ ಸೇರಿ ಐವರು ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಂಜಿತಾ, ಆಕೆಯ ಪ್ರಿಯಕರ ಗಣೇಶ್, ಶಿವಾನಂದ, ದೀಪು, ಶರತ್ ಎಂದು ಗುರುತಿಸಲಾಗಿದೆ. ಇನ್ನೂ ಆರೋಪಿ ಗಣೇಶ್ ಮೃತ ಅರುಣ್ಗೆ ಫೈನಾನ್ಸ್ ಕೂಡ ಕೊಡಿಸಿದ್ದ ಎಂಬ ವಿಚಾರ ತಿಳಿದು ಬಂದಿದೆ.
ಕಳೆದ ವಾರ ತಲಘಟ್ಟಪುರದ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ ಎಸೆದು ಹೋಗಿದ್ದರು. ವ್ಯಕ್ತಿಯ ಗುರುತು ಸಿಗದಂತೆ ಹಲ್ಲೆ ನಡೆಸಲಾಗಿತ್ತು.
ಇದರಿಂದಾಗಿ ಆತನ ಗುರುತು ಪತ್ತೆ ಹಚ್ಚಲು ಪೊಲೀಸರಿಗೆ ಒಂದು ದಿನ ಬೇಕಾಗಿತ್ತು. ಬಳಿಕ ಪೊಲೀಸರು ಕೊಲೆಯಾದ ವ್ಯಕ್ತಿಯನ್ನು ಆರ್ಆರ್ ನಗರದ ಗೌಡ್ರು ಬಾಡೂಟ ಎಂಬ ಹೋಟೆಲ್ ನಡೆಸುತ್ತಿದ್ದ ಅರುಣ್ ಎಂದು ಗುರುತಿಸಿದ್ದರು.




