ಪತ್ನಿಯನ್ನು ಕೊಲೆಗೈದು ಮೃತದೇಹವನ್ನು ನೇಣಿಗೆ ಹಾಕಿದ ಪತಿ
ಹಾಸನ: ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಬಳಿಕ ಶವವನ್ನು ನೇಣಿಗೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಮೃತಳನ್ನು ಹೇಮಾವತಿ (28) ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ಗುರುರಾಜ್ ಹತ್ಯೆ ಮಾಡಿದ್ದಾನೆ. ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಗುರುರಾಜ್ ಹತ್ತು ವರ್ಷಗಳ ಹಿಂದೆ ಚಿಕ್ಕಮಗಳೂರು ಮೂಲದ ಹೇಮಾವತಿ (28) ರನ್ನ ಮದುವೆಯಾಗಿದ್ದ.
ಮದುವೆಯಾದ ವರ್ಷದಿಂದಲೂ ವರದಕ್ಷಿಣೆ ಹೆಸರಿನಲ್ಲಿ ಹೇಮಾವತಿಗೆ ಗುರುರಾಜ್ ಕಿರುಕುಳ ನೀಡುತ್ತಾ ಬಂದಿದ್ದಾನೆ. ಇದೀಗ ವಿನಾಕಾರಣ ಪತ್ನಿ ಮೇಲೆ ಅನುಮಾನದಿಂದ ಜಗಳ ಮಾಡಿ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಶುಕ್ರವಾರ ತನ್ನ ಇಬ್ಬರು ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೇಮಾವತಿಯನ್ನು ಗುರುರಾಜ್ ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ನೇತು ಹಾಕಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಹತ್ಯೆ ಪ್ರಕರಣ ಬಯಲಾಗಿದೆ.




