ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕುತ್ತಿಗೆ ಸೀಳಿ ಕೊಲೆ ಮಾಡಿದ ತಂದೆ
ಮಂಡ್ಯ: ಕೌಟುಂಬಿಕ ಕಲಹ ಹಿನ್ನೆಲೆ ಪಾಪಿ ತಂದೆ ಇಬ್ಬರು ಪುಟ್ಟ ಮಕ್ಕಳ ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ತನ್ನ ಮಡದಿಗೂ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಜರುಗಿದೆ.
ಆದರ್ಶ (4) ಹಾಗೂ ಅಮೂಲ್ಯ (2) ತಂದೆಯಿಂದ ಕೊಲೆಯಾದ ದುರ್ದೈವಿ ಮಕ್ಕಳು. ಶ್ರೀಕಾಂತ್ ತನ್ನ ಇಬ್ಬರು ಮಕ್ಕಳನ್ನು ಕೊಂದು ತನ್ನ ಪತ್ನಿ ಲಕ್ಷ್ಮಿಗೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಶ್ರೀಕಾಂತ್ ಗುಲ್ಬರ್ಗ ಜಿಲ್ಲೆಯ ಗಾಣಗಪುರ ಗ್ರಾಮದವನಾಗಿದ್ದು, ಲಕ್ಷ್ಮಿಯನ್ನು ವರಿಸಿ 6 ವರ್ಷಗಳಾಗಿತ್ತು. ಮದುವೆಯಾದಾಗಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆಯಾಗುತ್ತಿತ್ತು.
ಬುಧವಾರ ಶ್ರೀಕಾಂತ್ ತನ್ನ ತಂದೆ, ತಾಯಿ ಜೊತೆ ಗಲಾಟೆ ಮಾಡಿಕೊಂಡು ಶ್ರೀರಂಗಪಟ್ಟಣ ಸಮೀಪದ ಮರಳಗಾಲ ಗ್ರಾಮದ ವಿರುಪಾಕ್ಷ ಎಂಬವರ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅತ್ತೆ-ಮಾವನ ಮನೆಗೆ ಬಂದಿದ್ದಾರೆ. ಬಳಿಕ ಇಲ್ಲೇ ಒಂದು ಕೆಲಸ ಕೊಡಿಸಿ ನಾವು ಇಲ್ಲಿಯೇ ಇರುತ್ತೇವೆ ಎಂದು ಶ್ರೀಕಾಂತ್ ಹೇಳಿದ್ದಾನೆ.




