ಉಳ್ಳಾಲ: ಸ್ಪೀಕರ್ ಯು.ಟಿ.ಖಾದರ್ ಅಭಿನಂದಿಸಿ ಹಾಕಿದ್ದ ಪ್ಲೆಕ್ಸ್ ಹರಿದ ಕಿಡಿಗೇಡಿಗಳು
ಉಳ್ಳಾಲ: ವಿಧಾನಸಭೆ ಸಭಾಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಯು.ಟಿ.ಖಾದರ್ ಅವರನ್ನು ಅಭಿನಂದಿಸಿ ಅಭಿಮಾನಿಗಳು ಹಾಕಿದ್ದ
ಪ್ಲೆಕ್ಸ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗಿನ ರಾಜ ರಸ್ತೆಯ ವಿಭಜಕ ಮತ್ತು ಇಕ್ಕೆಲೆಗಳಲ್ಲಿ ಯು.ಟಿ ಖಾದರ್ ಅವರಿಗೆ ಅಭಿನಂದಿಸಿ ಪ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಕಳೆದ ಆದಿತ್ಯವಾರ ಉಳ್ಳಾಲದ ಮಹಾತ್ಮಗಾಂಧಿ ರಂಗ ಮಂದಿರದಲ್ಲಿ ಶಾಸಕರಿಗೆ ನಡೆದ ನಾಗರಿಕ ಸನ್ಮಾನಕ್ಕೂ ಶುಭ ಕೋರಿ ಪ್ಲೆಕ್ಸ್ ಗಳನ್ನು ಹಾಕಲಾಗಿತ್ತು. ನಿನ್ನೆ ರಾತ್ರಿ ಕಿಡಿಗೇಡಿಗಳು ಐದಾರು ಪ್ಲೆಕ್ಸ್ ಗಳನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯ ಕೂಗಳತೆಯ ಅಂತರದಲ್ಲಿ ಹಾಕಲಾಗಿದ್ದ ಫ್ಲೆಕ್ಸನ್ನೂ ಹರಿದು ಹಾಕಿದ್ದಾರೆ.
ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಕೃತ್ಯ ಎಸಗಿರುವುದಾಗಿ ಮಾಹಿತಿ ಲಭಿಸಿದೆ. ಪ್ಲೆಕ್ಸ್ ಗಳನ್ನು ಸ್ಥಳೀಯ ನಗರಾಡಳಿತದಿಂದ ಅನುಮತಿ ಪಡೆಯದೆ ಅಳವಡಿಸಿರುವುದರಿಂದ ಈ ವರೆಗೂ ಯಾರೂ ಠಾಣೆಗೆ ದೂರು ನೀಡಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.




