ಕರ್ತವ್ಯ ನಿರತ ಪೂಂಜಲಕಟ್ಟೆ ಠಾಣೆಯ ಎಸ್ಸೈ ಸೌಮ್ಯರ ಕಾಲು ಮುರಿಯುತ್ತೇವೆ ಎಂದ ಹಿಂಜಾವೇ ಮುಖಂಡನ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಿಸಲು ಆಗ್ರಹ: ಎಸ್.ಡಿ.ಪಿ.ಐ
ಮಂಗಳೂರು: ಕಳೆದ 21 ನೇ ತಾರೀಕು ಕಾರಿಂಜದಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ ಜಿಲ್ಲಾಧಿಕಾರಿಯ ಕೊರಳ ಪಟ್ಟಿ ಹಿಡಿಯುತ್ತೇವೆ ಎಂದು ಬೆದರಿಕೆ ಹಾಕಿದ ಬೆನ್ನಲ್ಲೇ ಹಿಂಜಾವೇ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಕರ್ತವ್ಯ ನಿರತ ಪೂಂಜಾಲಕಟ್ಟೆ ಠಾಣೆಯ ಎಸ್ಸೈ ಸೌಮ್ಯರನ್ನು ಒಂದು ಮಹಿಳೆ ಎಂಬುವುದನ್ನೂ ಕೂಡ ಪರಿಗಣಿಸದೆ ಕೇವಲ ಧ್ವಜವನ್ನು ಕಾರ್ಯಕ್ರಮದ ನಂತರ ತೆಗೆಯಬೇಕು ಎಂದು ಹೇಳಿದ ಕೇವಲ ಒಂದೇ ಕಾರಣಕ್ಕಾಗಿ ಪತ್ರಿಕಾಗೋಷ್ಠಿ ಕರೆದು ಕಾಲು ಮುರಿಯುತ್ತೇವೆ ಎಂದು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಬೆದರಿಕೆ ಹಾಕಿದ್ದು ಈಗಾಗಲೇ ಸ್ಥಳೀಯ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.
ಕರ್ತವ್ಯ ನಿರತ ಒಬ್ಬ ಠಾಣಾ ಎಸ್ಸೈ ಅವರಿಗೆಯೇ ಈ ರೀತಿ ಬಹಿರಂಗ ಬೆದರಿಕೆ ಹಾಕಿದರೂ ಕೇಸು ದಾಖಲಿಸಿ ಬಂಧಿಸಲು ಯಾಕೆ ಪೊಲೀಸ್ ಮುಂದಾಗಲಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ. ಹಿಂಜಾವೇ ನಾಯಕರ ಈ ರೀತಿಯ ಬೆದರಿಕೆಗಳು ಸಮಾಜದಲ್ಲಿ ಪೊಲೀಸರ ಘನತೆಯನ್ನು,ಕುಗ್ಗಿಸುವ ಪ್ರಯತ್ನದ ಭಾಗವಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಹಿಂಜಾವೇ ಮುಖಂಡನ ಮೇಲೆ ಕಠಿಣ ಕೇಸು ದಾಖಲಿಸಬೇಕು ಮತ್ತು ಕೂಡಲೇ ಬಂಧಿಸಿ ಸಮಾಜದಲ್ಲಿ ಅಶಾಂತಿ ಹುಟ್ಟಿಸುವಂತಹವರಿಗೆ ಕಾನೂನಿನ ಮುಖಾಂತರ ಸೂಕ್ತ ಉತ್ತರ ನೀಡಬೇಕೆಂದು ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸರಪಾಡಿ ಬ್ಲಾಕ್ ಅಧ್ಯಕ್ಷರಾದ ಬದ್ರುದ್ದೀನ್ ಮೈಂದಳ ಆಗ್ರಹಿಸಿದ್ದಾರೆ.