ಕಡಬ: ನಕಲಿ ಮಂತ್ರವಾದಿಗೆ ಯುವಕರ ತಂಡದಿಂದ ಹಲ್ಲೆ
ಕಡಬ: ಮಂತ್ರದ ಮೂಲಕ ಜನರ ಕಷ್ಟ ಬಗೆಹರಿಸುವ ಸೋಗಿನಲ್ಲಿ ಓಡಾಡಿಕೊಂಡಿದ್ದ ಕಡಬದ ನಕಲಿ ಮಂತ್ರವಾದಿ ಮತ್ತು ಆತನ ಸಹಚರನನ್ನು ಮನೆಯೊಂದರಲ್ಲಿ ಕೂಡಿಹಾಕಿ ಯುವಕರ ತಂಡವೊಂದು ಹಲ್ಲೆ ಮಾಡಿದ ಘಟನೆ ನಡೆದಿದೆ.
ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸುದ್ದಿಯಾಗಿದೆ.
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ವಳಾಲು ಪರಿಸರದಲ್ಲಿ ಈ ಘಟನೆ ನಡೆದಿದ್ದು ವಿವಾದವು ಠಾಣೆಯ ಮೆಟ್ಟಿಲೇರಿ ಬಳಿಕ ಮಾತುಕತೆಯ ಮೂಲಕ ಮುಕ್ತಾಯವಾಗಿದೆ.
ಕಡಬ ಕೋಡಿಂಬಾಳ ಗ್ರಾಮದ ನಿವಾಸಿಗಳು ಆಗಿರುವ, ಈ ಹಿಂದೆ ಗುಜರಿ ವ್ಯವಹಾರ ಮಾಡುತ್ತಿದ್ದ ವ್ಯಕ್ತಿಗಳು ಮಂತ್ರವಾದಿಯ ಮುಖವಾಡದಲ್ಲಿ ಹಲವೆಡೆ ಪರಿಚಿತರಾಗಿದ್ದರು.
ಹೀಗಾಗಿ ಉಪ್ಪಿನಂಗಡಿ ಸಮೀಪದ ಮಗುವಿಗೆ ಆರೋಗ್ಯ ಸಮಸ್ಯೆ ಕಂಡು ಬಂದ ಕಾರಣ ಮುಸ್ಲಿಂ ಸಮುದಾಯಕ್ಕೆ ಸೇರಿದ ಕುಟುಂಬವೊಂದು ಮಂತ್ರವಾದಿಯನ್ನು ಸಂಪರ್ಕಿಸಿದ್ದರು. ವಾರದ ಹಿಂದೆ ಮನೆಗೆ ಹೋಗಿ ಕಪ್ಪು ನೂಲು ಮಂತ್ರಿಸಿ ಮಗುವಿಗೆ ಕಟ್ಟಿದ್ದ ವೇಳೆ ನಕಲಿ ಮಂತ್ರವಾದಿಯ ಪರಿಚಯದ ವ್ಯಕ್ತಿ ಅದೇ ಮನೆಗೆ ಬಂದಿದ್ದು ಆತ ಈ ಸನ್ನಿವೇಶ ನೋಡಿ ಅಚ್ಚರಿಗೊಂಡಿದ್ದ ಎನ್ನಲಾಗಿದೆ.
ನಂತರ ಮಾತಿಗೆ ಮಾತು ಬೆಳೆದು ಮಂತ್ರವಾದದ ಹೆಸರಿನಲ್ಲಿ ಮೋಸ ಮಾಡುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಯುವಕರು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ.




