ವಿದ್ಯುತ್ ಬಿಲ್ ಕಲೆಕ್ಷನ್ಗೆ ಹೋಗಿದ್ದ ಸಿಬ್ಬಂದಿ ಮೇಲೆ ಹಲ್ಲೆ
ಹಾಸನ: ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಭರವಸೆ ನೀಡಿರುವ ಹಿನ್ನೆಲೆ ಹಾಸನ ಜಿಲ್ಲೆಯಲ್ಲೂ ವಿದ್ಯುತ್ ಬಿಲ್ ಪಾವತಿಸಲು ಜನರು ನಿರಾಕರಿಸುತ್ತಿದ್ದಾರೆ.
ಬಿಲ್ ಕಲೆಕ್ಷನ್ಗೆ ಹೋಗಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ತಂದೆ ಹಾಗೂ ಆತನ ಅಪ್ರಾಪ್ತ ಮಗನಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ, ಹಳೇ ಕೋರ್ಟ್ ರಸ್ತೆಯಲ್ಲಿರುವ ಕೋಳಿ ಅಂಗಡಿ ಮಾಲೀಕ ಸುರೇಶ್ ಎಂಬವರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬುಧವಾರ ಚೆಸ್ಕಾಂ ಸಿಬ್ಬಂದಿ ಸಂತೋಷ್ ಹಾಗೂ ಇತರರು ಸುರೇಶ್ ಮನೆ ಬಳಿ ತೆರಳಿ ಬಾಕಿ 1,150 ರೂ. ವಿದ್ಯುತ್ ಬಿಲ್ ಪಾವತಿಸುವಂತೆ ಕೇಳಿದ್ದಾರೆ. ಆದ್ರೆ ಸುರೇಶ್ ನಾವು ಹಣ ಕಟ್ಟಲ್ಲ, ಸರ್ಕಾರ ಹೇಳಿದೆ ಆದರೂ ನೀನು ಬಿಲ್ ಕೇಳಲು ಬಂದಿದ್ದೀಯಾ ಅಂತಾ ಚೆಸ್ಕಾಂ ಸಿಬ್ಬಂದಿಯನ್ನ ಹಾಗೂ ಆತನ ಪತ್ನಿ ನಿಂದಿಸಿ ಜಗಳ ತೆಗಿದಿದ್ದಾನೆ.




