December 16, 2025

ಮೂಡುಬಿದಿರೆ: ಕೃಷಿ ಋಷಿ ಡಾ. ಎಲ್.ಸಿ. ಸೋನ್ಸ್ ನಿಧನ
 

0
IMG-20230405-WA0004.jpg

ಮೂಡುಬಿದಿರೆ: ಕೃಷಿ ತಜ್ಞ ಮೂಡುಬಿದಿರೆಯ ಬನ್ನಡ್ಕದ ಸೋನ್ಸ್ ಫಾರ್ಮ್ ನ ಕೃಷಿ ಋಷಿ ಡಾ. ಎಲ್. ಸಿ. ಸೋನ್ಸ್ ಅವರು ಎ.5 ಬುಧವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು. ಕೃಷಿರಂಗದಲ್ಲಿ ಅಪಾರ ಸಾಧನೆ ಮಾಡಿದ ಇವರು ತನ್ನ ಜೀವನವನ್ನು ಕೃಷಿಗಾಗಿ ಮುಡಿಪಾಗಿಟ್ಟವರು.

1934ರ ಎಪ್ರಿಲ್ 4ರಂದು ಜನಿಸಿದ ಲಿವಿಂಗ್ ಸ್ಟನ್ ಚಂದ್ರಮೋಹನ ಸೋನ್ಸ್ ಸಸ್ಯ ಶಾಸ್ತ್ರದಲ್ಲಿ ಪದವಿ, ಮೊಂಟಾನ ವಿ.ವಿ.ಯಿಂದ ಪಿಎಚ್ ಡಿ. ಪದವಿ ಪಡೆದುಕೊಂಡಿದ್ದರು.ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಸೋನ್ಸ್ ಅನಾನಸು ಕೃಷಿ, ಬಿದಿರಿನ ವಿವಿಧ ಪ್ರಬೇಧ, ದೇಶ-ವಿದೇಶಗಳ ಹಣ್ಣು-ತರಕಾರಿ ಪ್ರಬೇಧಗಳನ್ನು ಮೂಡುಬಿದಿರೆ ಬನ್ನಡ್ಕದ ಮಣ್ಣಿನಲ್ಲಿ ಬೆಳೆಸಿ, ಅದರಿಂದ ಫಸಲು ಹಾಗೂ ಲಾಭಗಳಿಸಿದವರಾಗಿದ್ದಾರೆ. ಜಲ ತಜ್ಞರಾಗಿಯೂ ವಿಶೇಷ ಪರಿಣಿತಿಯನ್ನು ಹೊಂದಿದ್ದರು.

ಕೃಷಿಯ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿರುವ ಸೋನ್ಸ್ ಹಲವಾರು ಸಂಘ-ಸಂಸ್ಥೆಗಳ ಸಕ್ರಿಯ ಪದಾಧಿಕಾರಿಯಾಗಿದ್ದರು.

ಬೆಂಗಳೂರು ಕೃಷಿ ವಿ.ವಿಯಿಂದ ಉತ್ತಮ ತೋಟಗಾರಿಕಾ ಸಾಧಕ ಪ್ರಶಸ್ತಿ, ಅಮೇರಿಕ ಮೊಟಾನಾ ವಿ.ವಿಯಿಂದ ವಿಶೇಷ ಹಳೆ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದು, ಅಮೇರಿಕದ ಹಳೆ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಅನ್ಯ ದೇಶದಿಂದ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಸೋನ್ಸ್. 2006 ಸಾಧಕ ಪ್ರಶಸ್ತಿ, 2004 ದ.ಕ ಜಿಲ್ಲಾ ರಾಜೋತ್ಸವ, ಹಿರಿಯಡ್ಕದ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದಿಂದ ಬೆಸ್ಟ್ ಫಾರ್ಮರ್ ಪ್ರಶಸ್ತಿ, 2010-ಬಾಗಲಕೋಟೆ ತೋಟಗಾರಿಕಾ ವಿ.ವಿಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಸನ್ಮಾನ ಸಹಿತ ದೇಶ ವಿದೇಶಗಳ ಹಲವಾರಯ ಸಂಘ ಸಂಸ್ಥೆಗಳು ಸೋನ್ಸ್ ಅವರ ಸಾಧನೆಯನ್ನು ಗೌರವಿಸಿದೆ. ನಡೆದ ವಿಶ್ವ ನೀರಾವರಿ ಸಮ್ಮೇಳನಕ್ಕೆ ಭಾಗವಹಿಸಿ, ಅವುಗಳ ಮಾದರಿಯನ್ನು ತನ್ನೂರಿನಲ್ಲಿ ಪ್ರಯೋಗಿಸಿದ್ದಾರೆ.

ಡಾ. ಎಲ್.ಸಿ . ಸೋನ್ಸ್ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ತನ್ನೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡ ಸಹೋದರ ಐ.ವಿ. ಸೋನ್ಸ್ ಇವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!