ಗಡಿ ಭಾಗದ ಚೆಕ್ ಪೋಸ್ಟ್ನಲ್ಲಿ ಪೊಲೀಸರ ತಪಾಸಣೆ: ಕಾರಿನಲ್ಲಿ ದಾಖಲೆ ಇಲ್ಲದ ಲಕ್ಷಾಂತರ ರೂ. ನೋಟಿನ ಕಟ್ಟು ಪತ್ತೆ
ರಾಯಚೂರು: ಕರ್ನಾಟಕ ತೆಲಂಗಾಣದ ಗಡಿ ಜಿಲ್ಲೆ ರಾಯಚೂರು ಜಿಲ್ಲೆಯ ಗಡಿ ಭಾಗದ ಚೆಕ್ ಪೋಸ್ಟ್ನಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಯಚೂರು ತಾಲೂಕಿನ ಶಕ್ತಿನಗರದ ಎರಡನೇ ಕ್ರಾಸ್ ಹತ್ತಿರ ಕೃಷ್ಣಾ ಸೇತುವೆ ಬಳಿ ಕಾರ್ನಲ್ಲಿ ಬುಧವಾರ 4 ಗಂಟೆಯ ಸುಮಾರಿಗೆ ದಾಖಲೆಯಿಲ್ಲದ ಲಕ್ಷಾಂತರ ರೂಪಾಯಿ ಸಾಗಿಸುವಾಗ ಸಿಕ್ಕಿದೆ.
ತೆಲಂಗಾಣ ರಾಜ್ಯದಿಂದ ರಾಯಚೂರು ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರ್ ನಂಬರ್ ಪ್ಲೇಟ್ ಇಲ್ಲದೆ ಬರುತ್ತಿತ್ತು. ಈ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ಮಾಡಲು ವಾಹನ ತಡೆದಿದ್ದಾರೆ.
ವಾಹನ ಪರಿಶೀಲನೆ ಮಾಡುವಾಗ ಕಾರ್ ಹಿಂದುಗಡೆಯ ಡಿಕ್ಕಿಯಲ್ಲಿ ಗರಿ ಗರಿ ನೋಟಿನ ಕಟ್ಟು ದೊರೆತಿವೆ. ಅದರಲ್ಲಿ ಮೂರು ಲಕ್ಷ ರೂಪಾಯಿ ಇತ್ತು ಎಂಬುದು ತಿಳಿದುಬಂದಿದೆ.
ಹಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲೆಗಳನ್ನು ಕೇಳಿದ್ದಾರೆ. ಆದರೆ ಕಾರಿನ ಮಾಲೀಕರು ಯಾವುದೇ ಸೂಕ್ತವಾದ ದಾಖಲೆಗಳು ಒದಗಿಸಿಲ್ಲ.
ಹೀಗಾಗಿ ಪೊಲೀಸರು ಹಣವನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.




