ರಸ್ತೆ ಅಪಘಾತ: ಪಿಯು ವಿದ್ಯಾರ್ಥಿ ಸೇರಿ ಇಬ್ಬರು ಸಾವು
ಬೆಂಗಳೂರು: ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಬಂದ ಕಾರು ಚಾಲಕ ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಗುದ್ದಿದ ಪರಿಣಾಮ ಪಿಯು ವಿದ್ಯಾರ್ಥಿ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಮಡಿವಾಳ ಸಂಚಾರಿ ಠಾಣೆ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಬಳಿ ನಡೆದಿದೆ.
ಆಂಧ್ರಪ್ರದೇಶದ ಆನಂತಪುರ ಜಿಲ್ಲೆ ಬೊಮ್ಮನಹಳ್ಳ ನಿವಾಸಿ ಕಾರ್ತಿಕ್ (23) ಮತ್ತು ಪ್ರಕಾಶಂ ಜಿಲ್ಲೆಯ ಭಗಿರಥ ರೆಡ್ಡಿ (17) ಮೃತ ಯುವಕರು.
ವ್ಯಾಸಂಗ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಕಾರ್ತಿಕ್, ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದು, ಚಂದ್ರಾಪುರದಲ್ಲಿ ಬಾಡಿಗೆ ರೂಮ್ನಲ್ಲಿ ನೆಲೆಸಿದ್ದ. ಇನ್ನು ಭಗಿರಥ ರೆಡ್ಡಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.
ಹೊಸೂರು ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದ.
ಹೊಸೂರು ಕಡೆ ಮಾರ್ಗದಿಂದ ಸೆಂಟರ್ ಮೀಡಿಯನ್ ದಾಟಿ ಬೆಂಗಳೂರು ಕಡೆಯ ಮಾರ್ಗದಲ್ಲಿ ರೂಪೇನಾ ಅಗ್ರಹಾರ ಕಡೆಯಿಂದ ಮಡಿವಾಳ ಕಡೆಗೆ ಚಾಲನೆಯಲ್ಲಿದ್ದ ವಾಹನಕ್ಕೆ ಕಾರು ಗುದ್ದಿದೆ.
ಅದೇ ವೇಗದಲ್ಲಿ ಮುಂದಕ್ಕೆ ಚಲಿಸಿ ಕಾರಿನ ಹಿಂಭಾಗದಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ತಮಿಳುನಾಡಿನ ಬಸ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ಜಖಂಗೊಂಡಿತ್ತು.




