March 12, 2026

ಸೊಸೈಟಿ ಮ್ಯಾನೇಜರ್ ಆತ್ಮಹತ್ಯೆ ಪ್ರಕರಣ: ಯಶ್ಪಾಲ್ ಸುವರ್ಣ ಸಹಿತ ಐವರು ವಿರುದ್ಧ ಮೊಕದ್ದಮೆ ದಾಖಲು

0
Malpe_sucide.jpg

ಮಲ್ಪೆ: ಉಡುಪಿಯ ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಆಡಳಿತ ನಿರ್ದೇಶಕ ಜಗದೀಶ್ ಮೊಗವೀರ, ಮಾಜಿ ಆಡಳಿತ ನಿರ್ದೇಶಕ ಜೆ.ಕೆ ಸೀನ ಗಂಗೊಳ್ಳಿ, ಮ್ಯಾನೇಜರ್ ಸಾರಿಕಾ, ಸಾಲಗಾರ ರಿಯಾಝ್‌ರ ವಿರುದ್ಧ ದೂರು ದಾಖಲಾಗಿದೆ.

ಮಾ.8ರಂದು ರಾತ್ರಿ ವೇಳೆ ಮಲ್ಪೆಯ ರಾಜ್ ಮಹಲ್ ಲಾಡ್ಜ್ ನಲ್ಲಿ ಸೊಸೈಟಿಯ ಮ್ಯಾನೇಜರ್ ಆಗಿದ್ದ ಸುಬ್ಬಣ್ಣ(50) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮೃತದೇಹದ ಬಳಿ ಡೆತ್ ನೋಟ್ ಸಿಕ್ಕಿದೆ. ಇದರಲ್ಲಿ ತನ್ನ ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಒತ್ತಡ ಮೇಲಾಧಿಕಾರಿಯ ಅಸಹಕಾರ ಮತ್ತು ಸಾಲಗಾರನ ಮೋಸದ ನಡವಳಿಕೆ ಕಾರಣ ಎಂದು ಬರೆಯಲಾಗಿದೆ.

ಈ ಬಗ್ಗೆ ಮೃತರ ಸಹೋದರ ಸುರೇಶ್ ಕೆ ಅವರು ಪೊಲೀಸರಿಗೆ ದೂರು ನೀಡಿದ್ದು, ಬ್ಯಾಂಕಿನ ಅಧ್ಯಕ್ಷ ಯಶಪಾಲ್ ಸುವರ್ಣ, ಆಡಳಿತ ನಿರ್ದೇಶಕ ಜಗದೀಶ್ ಮೊಗವೀರ, ಮಾಜಿ ಆಡಳಿತ ನಿರ್ದೇಶಕ ಜೆ.ಕೆ ಸೀನ ಗಂಗೊಳ್ಳಿ, ಮ್ಯಾನೇಜರ್ ಸಾರಿಕಾ, ಸಾಲಗಾರ ರಿಯಾಝ್ ಎಂಬವರು ನೀಡಿದ ಮಾನಸಿಕ ಒತ್ತಡ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಸಾಲ ವಸೂಲಾತಿಯನ್ನು ಮಾಡಿ ಕೊಡದಿದ್ದರೆ ನಿನ್ನ ಮನೆಯನ್ನಾದರೂ ಮಾರಿ ಬ್ಯಾಂಕಿನ ಸಾಲ ತೀರಿಸಬೇಕು, ಇಲ್ಲದಿದ್ದರೆ ನಿನ್ನ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಸಾವಿನ ಬಗ್ಗೆ ಸಂಶಯ ಇದ್ದು, ಆದುದರಿಂದ ಆಡಳಿತ ಮಂಡಳಿ ಮತ್ತು ಸಾಲಗಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!