ವಿಟ್ಲ: ಇನ್ನೂ ಅಭಿವೃದ್ಧಿಗೊಳ್ಳದ ಅಳಕೆಮಜಲು-ಕೋಲ್ಪೆ ರಸ್ತೆ: ಬ್ಯಾನರ್ ಅಳವಡಿಸಿ, ರಾಜಕೀಯ ಮುಖಂಡರಿಗೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು
ವಿಟ್ಲ: ಅಳಕೆಮಜಲು ಮಾರ್ಗವಾಗಿ ಕೋಲ್ಪೆ ದೇವಸ್ಥಾನಕ್ಕೆ ವಾಹನ ಸಂಚಾರಕ್ಕೆ ಮಾರ್ಗದ ವ್ಯವಸ್ಥೆ ಮಾಡದ ರಾಜಕೀಯ ಮುಖಂಡರಿಗೆ ಮತ್ತು ಧಾರ್ಮಿಕ ಮುಖಂಡರ ವಿರುದ್ದ ಗ್ರಾಮಸ್ಥರು ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಬೇಡಿಕೆಯಲ್ಲಿರುವ ಇಡ್ಕಿದು ಗ್ರಾಮದ ಅಳಕೆಮಜಲು ಮಾರ್ಗವಾಗಿ ಕೋಲ್ಪೆ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚರಿಸುವ ಅನುಕೂಲವಾಗುವಂತೆ ರಸ್ತೆಯನ್ನು ಅಗಲೀಕರಣಗೊಳಿಸಲು ಹಲವು ಬಾರಿ ಗ್ರಾಮಸ್ಥರು ಜಮೀನಿನ ಮಾಲೀಕರಲ್ಲಿ ಮತ್ತು ರಾಜಕೀಯ ಮುಖಂಡರಲ್ಲಿ ಮನವಿಯನ್ನು ಸಲ್ಲಿಸಿದ್ದರು ರಸ್ತೆಯ ಅಗಲೀಕರಣ ಮರಿಚಿಕೆಯಾಗಿಯೇ ಉಳಿದಿದೆ ಎಂದು ಬ್ಯಾನರ್ ನಲ್ಲಿ ಉಲ್ಲೇಖಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶದ ವೇಳೆ ಊರಿನವರಿಗೆ ಈ ರಸ್ತೆ ಅಗಲೀಕರಣಗೊಂಡು ಲಘು ವಾಹನ ಸಂಚಾರ ವ್ಯವಸ್ಥೆ ಆಗಬಹುದೆಂದು ನಿರೀಕ್ಷೆಯಿತ್ತು. ಆದರೆ ಊರಿನವರ ಬೇಡಿಕೆಯ ಸ್ಪಂದನೆಯೇ ಸಿಕ್ಕಿಲ್ಲ. ಎಂದು ದೂರಲಾಗಿದೆ.
ಇದರಿಂದ ಬೇಸರಗೊಂಡ ನೊಂದ ಗ್ರಾಮಸ್ಥರು ಇದೀಗ ಬ್ಯಾನರ್ ಒಂದನ್ನು ಹಾಕಿದ್ದು, ರಾಜಕೀಯ ಮುಖಂಡರಿಗೆ ಮತ್ತು ಧಾರ್ಮಿಕ ಮುಖಂಡರಿಗೆ ನಮ್ಮ ಒಂದು ಕಿವಿ ಮಾತು ಇನ್ನ ಕೆಲವೇ ತಿಂಗಳಲ್ಲಿ ಚುನಾವಣೆ ಹತ್ತಿರ ಬರಲಿದೆ. ನೀವು ನಮ್ಮ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷದ ಪ್ರಚಾರಕ್ಕೆ ಬರಬೇಡಿ. ನಮಗೆ ತಿಳಿದಿದೆ ನಾವು ಯಾರಿಗೆ ಮತ ಚಲಾಯಿಸಬೇಕು ಯಾರನ್ನು ಆಯ್ಕೆ ಮಾಡಬೇಕೆಂದು ಇಡೀ ಊರಿಗೆ ಅನುಕೂಲವಾಗುವಂತಹ ರಸ್ತೆಯನ್ನು ಮಾತುಕತೆಯಿಂದ ಬಗೆಹರಿಸಲು ನಿಮಗೆ ಸಾಧ್ಯವಾಗದಿದ್ದರೆ ನಮ್ಮ ಮತವನ್ನು ಕೇಳುವ ಹಕ್ಕು ನಿಮಗಿಲ್ಲ ಪ್ರೋತ್ಸಾಹಿಸಿದ ಎಲ್ಲಾ ರಾಜಕೀಯ ಮತ್ತು ಧಾರ್ಮಿಕ ಮುಖಂಡರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.




