ರಿಸೆಪ್ಸನ್ ಗೂ ಮುನ್ನ ನವದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ರಾಯ್ಪುರ್: ಆರತಕ್ಷತೆಗೂ ಮುನ್ನವೇ ನವದಂಪತಿಗಳು ಶವವಾಗಿ ಪತ್ತೆಯಾದ ಘಟನೆ ರಾಯ್ಪುರ್ನ, ತ್ರಿಕ್ರಪಾರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಿಜ್ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಹದ ಮೇಲೆ ಬಲವಾದ ಇರಿತದ ಗಾಯಗಳಾಗಿದ್ದು, ಇಬ್ಬರ ನಡುವೆ ಜಗಳವಾಗಿ ಪತಿ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಅಸ್ಲಾಂ (24) ಹಾಗೂ ಕಹ್ಕಶಾ ಬಾನೊ (22) ಭಾನುವಾರವಷ್ಟೇ ವಿವಾಹವಾಗಿದ್ದರು. ಮಂಗಳವಾರ ರಾತ್ರಿ ಆರತಕ್ಷತೆ ನಡೆಯಬೇಕಿತ್ತು.
ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದಾಗ ವಧುವಿನ ಕಿರುಚಾಟದ ಧ್ವನಿ ಕೇಳಿ ವರನ ತಾಯಿ ಅಲ್ಲಿಗೆ ಹೋಗಿದ್ದಾರೆ.
ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಕುಟುಂಬದ ಸದಸ್ಯರು ಕರೆದರೂ ಪ್ರತಿಕ್ರಿಯೆ ಬರದಿದ್ದಾಗ, ಕಿಟಕಿಯಿಂದ ನೋಡಿದ್ದಾರೆ. ಆಗ ಇಬ್ಬರೂ ಪ್ರಜ್ಞಾಹೀನವಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ತಿಳಿಸಿದ್ದಾರೆ.
ಬಾಗಿಲು ಒಡೆದು ಒಳಗೆ ತೆರಳಿದ ಪೊಲೀಸರು ಮೃತ ದೇಹಗಳನ್ನು ಶವ ಪರೀಕ್ಷೆಗೆ ಕಳುಹಿಸಿ, ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





