ಕಾರ್ಕಳ ವಿಧಾನಸಭಾ ಕ್ಷೇತ್ರ ಪಕ್ಷೇತರನಾಗಿ ನಾನು ಸ್ಪರ್ಧಿಸಲಿದ್ದೇನೆ: ಮುತಾಲಿಕ್ ಅಧಿಕೃತ ಘೋಷಣೆ
ಕಾರ್ಕಳ: ಸಾವಿರಾರು ಹಿಂದೂ ಕಾರ್ಯಕರ್ತರ ನೋವಿನ ಧ್ವನಿಯಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾರ್ಕಳದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದಾರೆ.
ಕಾರ್ಕಳ ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಅನೇಕ ತಿಂಗಳುಗಳಿಂದ 12 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರು ವರದಿ ಸಲ್ಲಿಸಿದ್ದಾರೆ . ಆ ಕ್ಷೇತ್ರಗಳ ಪೈಕಿ ಕಾರ್ಕಳವನ್ನೇ ಅಯ್ಕೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಗೋಕಳ್ಳತನ ಕಾರ್ಕಳ ಕ್ಷೇತ್ರದಲ್ಲೆ ನಡೆಯುತ್ತಿದೆ. ಇಲ್ಲಿನ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ರೌಡಿ ಶೀಟರ್ ಕೇಸುಗಳು ದಾಖಲಾಗಿವೆ ಹಿಂದೂ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದರು
2004ರಲ್ಲಿ ಸಚಿವ ಸುನೀಲ್ ಕುಮಾರ್ ಕಲ್ಲು ಕೋರೆ ವಿರುದ್ದ ಹಾಗೂ ಸುಚೇತ ಕೊಲೆ ಪ್ರಕರಣಗಳ ಬಗ್ಗೆ ಹೋರಾಟ ಮಾಡಿ ಬಂದವರು. ಆದರೆ ಆ ಕುಟುಂಬಕ್ಕೆ ನ್ಯಾಯವೆ ಸಿಕ್ಕಿಲ್ಲ. ಅಪರಾದಿಗಳನ್ನು ಹಿಡಿಯಲು ಅವರಿಂದ ಅಗಿಲ್ಲ. ಅ ಮೂಲಕ ಹಿಂದುತ್ವದ ಮೂಲ ಸಿದ್ದಾಂತವನ್ನು ಮರೆತಿದ್ದಾರೆ. ಈಗಾಗಲೇ ಕಾರ್ಕಳ ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಭ್ರಷ್ಟಾಚಾರ ವಿರೋಧಿ ಹೋರಾಟ ಹಾಗೂ ಹಿಂದುತ್ವವೆ ನನ್ನ ಮೂಲ ಧ್ಯೇಯವಾಗಿದೆ ಎಂದಿದ್ದಾರೆ.
ಇನ್ನು ನನಗೆ ಬಿಜೆಪಿ ಹಾಗೂ ಅದರ ಸಿಧ್ಧಾಂತದ ಬಗ್ಗೆ ವಿರೋಧ ವಿಲ್ಲ ಪ್ರಧಾನಿ ಮೋದಿ ಹಾಗೂ ಯೋಗಿಯ ಮೇಲೆ ನನಗೆ ಅಪಾರ ನಂಬಿಕೆಯಿದೆ ಆದರೆ ಬಿಜೆಪಿಯ ರಾಜ್ಯ ನಾಯಕರುಗಳ ವಿರುದ್ಧ ನನ್ನ ಅಸಮಾಧಾನ ವಿದೆ. ಹಿಂದುತ್ವದ ಮೂಲವನ್ನು ಮರೆತು ವಿಕೃತಿ ಕಡೆಗೆ ಕೊಂಡೊಯ್ಯುತ್ತಿದ್ದಾರೆ, ಕೆಲವು ಬಿಜೆಪಿ ನಾಯಕರುಗಳು 2014 ರಲ್ಲಿ ನನ್ನನ್ನು ಬಿಜೆಪಿಗೆ ಸೇರಿಸಿಕೊಂಡು ಸಂಜೆಯವೇಳೆಗೆ ಉಚ್ಚಾಟಿಸಿ ಅವಮಾನಮಾಡಿದ್ದಾರೆ ಎಂದರು.
ಬಿಜೆಪಿಗೆ ಪ್ರಾಮಾಣಿಕತೆ ಇದ್ದಲ್ಲಿ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ನಿಲ್ಲಿಸದೆ ನನಗೆ ಬೆಂಬಲ ಕೊಡಲಿ, ಆದರೆ ಬಿಜೆಪಿಯ ಟಿಕೆಟ್ ಅನ್ನು ನಾನು ಎಂದಿಗೂ ಸ್ವೀಕಾರ ಮಾಡುವುದಿಲ್ಲ.ರೌಡಿ ಶೀಟರ್ ಕೇಸ್ ಹಾಕಿಸಿಕೊಂಡ ಕಾರ್ಯಕರ್ತರು ಕಾರ್ಕಳದಲ್ಲಿಯೆ ಹೆಚ್ಚಾಗಿದ್ದಾರೆ ಅವರ ನೋವಿಗೆ ನಾನು ಮೊದಲು ದ್ವನಿಯಾಗಬೇಕಾಗಿದೆ .ಹೆಬ್ರಿಯ ತಾಲೂಕಿನ ಅನೇಕ ಕಡೆಗಳಲ್ಲಿ ಇಂದಿಗೂ ರಸ್ತೆಯೆ ಮರಿಚಿಕೆಯಾಗಿದೆ ಮೂಲ ಸೌಕರ್ಯಗಳೆ ಇಲ್ಲವಾಗಿದೆ ಅದರಿಂದಾಗಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಇಲ್ಲೆ ಸ್ಪರ್ಧಿಸುತಿದ್ದೇನೆ ಎಂದಿದ್ದಾರೆ.