ಊಟ ಸೇವಿಸಿದ್ದ ಶಾಲಾ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು: ಬೇಳೆ ಹಾಕಿದ್ದ ಡಬ್ಬದಲ್ಲಿ ಕಂಡುಬಂದ ಹಾವು
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಅಡುಗೆಯಲ್ಲಿ ಹಾವು ಕಂಡುಬಂದಿದೆ ಎಂದು ಹೇಳಲಾದ ಆಹಾರವನ್ನು ಸೇವಿಸಿದ ಹಲವಾರು ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಮಯೂರೇಶ್ವರ ಬ್ಲಾಕ್ನ ಪ್ರಾಥಮಿಕ ಶಾಲೆಯ ಸುಮಾರು 30 ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ ಎಂದು ಅವರು ಹೇಳಿದರು.
ಭೋಜನ ಸಿದ್ಧಪಡಿಸಿದ್ದ ಶಾಲೆಯ ಸಿಬ್ಬಂದಿಯೊಬ್ಬರು, ಬೇಳೆ ತುಂಬಿದ ಕಂಟೈನರ್ ಒಂದರಲ್ಲಿ ಹಾವು ಕಂಡುಬಂದಿದೆ. ಮಕ್ಕಳು ವಾಂತಿ ಮಾಡಲು ಪ್ರಾರಂಭಿಸಿದ್ದರಿಂದ ನಾವು ಅವರನ್ನು ರಾಂಪುರಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಬೇಕಾಯಿತು ಎಂದು ಹೇಳಿದರು.
ಮಧ್ಯಾಹ್ನದ ಊಟ ತಿಂದು ಮಕ್ಕಳು ಅಸ್ವಸ್ಥರಾಗುತ್ತಿರುವ ಬಗ್ಗೆ ಹಲವಾರು ಗ್ರಾಮಸ್ಥರಿಂದ ದೂರುಗಳು ಬಂದಿವೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ದೀಪಾಂಜನ್ ಜನಾ ಸುದ್ದಿಗಾರರಿಗೆ ತಿಳಿಸಿದರು.




