ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿಯ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಲಿದೆ: ಜಿಲ್ಲಾಧಿಕಾರಿ ರವಿಕುಮಾರ್ ಮಾಹಿತಿ
ಮಂಗಳೂರು: ತೀವ್ರ ಟೀಕೆ, ಗೃಹ ಸಚಿವರ ಹೇಳಿಕೆಯ ಬಗ್ಗೆ ಅಣಕ ಕೇಳಿಬಂದ ನಂತರ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಡೆಗೂ ಎಚ್ಚೆತ್ತುಕೊಂಡಿದೆ. ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರ ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ಭರಿಸುವುದಾಗಿ ಜಿಲ್ಲಾಧಿಕಾರಿ ರವಿಕುಮಾರ್, ಆಸ್ಪತ್ರೆಗೆ ಪತ್ರ ಬರೆದು ಅಧಿಕೃತವಾಗಿ ತಿಳಿಸಿದ್ದಾರೆ.
ಘಟನೆಯಲ್ಲಿ ಸುಟ್ಟ ಗಾಯಕ್ಕೀಡಾಗಿದ್ದ ಪುರುಷೋತ್ತಮ ಪೂಜಾರಿ ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ಭರಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದರು. ಇವರು ಹೇಳಿಕೆ ನೀಡಿದ್ದು ಬಿಟ್ಟರೆ, ಚಿಕಿತ್ಸೆಯ ಕಡೆಗೆ ಜಿಲ್ಲಾಡಳಿತ ಆಗಲೀ, ಜನಪ್ರತಿನಿಧಿಗಳಾಗಲೀ ಗಮನ ಕೊಟ್ಟಿರಲಿಲ್ಲ. ಕುಕ್ಕರ್ ಬ್ಲಾಸ್ಟ್ ಘಟನೆ ನಡೆದು ಒಂದು ತಿಂಗಳು ಕಳೆದಿದ್ದು, ಈ ನಡುವೆ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಲ್ಲಿ ಒಂದಷ್ಟು ಚೇತರಿಕೆ ಕಂಡಿದ್ದಾರೆ. ಆದರೆ, ಚಿಕಿತ್ಸೆಗೆ ಸರಕಾರದ ನೆರವು ಸಿಗದೇ ಇದ್ದುದರಿಂದ ಕುಟುಂಬ ಪರದಾಟ ನಡೆಸುತ್ತಿತ್ತು. ಮಗಳ ಇಎಸ್ಐ ಸೌಲಭ್ಯದಿಂದ ಚಿಕಿತ್ಸೆ ಮುಂದುವರಿಸಲಾಗಿತ್ತು.
ಒಂದು ತಿಂಗಳ ವರೆಗೂ ಚಿಕಿತ್ಸೆಯ ವೆಚ್ಚವನ್ನು ಪುರುಷೋತ್ತಮ ಪೂಜಾರಿಯವರ ಮಗಳ ಇಎಸ್ಐ ಸೌಲಭ್ಯದಿಂದ ಭರಿಸಲಾಗಿತ್ತು. ಈ ಬಗ್ಗೆ ವರದಿ ಬಿತ್ತರವಾಗುತ್ತಿದ್ದಂತೆ, ಜನಪ್ರತಿನಿಧಿಗಳ ಅಸಡ್ಡೆಯ ಬಗ್ಗೆ ಭಾರೀ ಟೀಕೆ ಕೇಳಿಬಂದಿತ್ತು. ವೆಚ್ಚ ಭರಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಸಚಿವರು ಎಲ್ಲಿದ್ದಾರೆ ಎಂದು ವರದಿಯಲ್ಲಿ ಪ್ರಶ್ನೆ ಮಾಡಲಾಗಿತ್ತು. ಇದೀಗ ಬಿಸಿ ತಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್ಚತ್ತುಕೊಂಡು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿಗೆ ಪತ್ರ ಬರೆದು, ಚಿಕಿತ್ಸೆ ವೆಚ್ಚವನ್ನು ಜಿಲ್ಲಾಡಳಿತದಿಂದ ನೀಡುವುದಾಗಿ ತಿಳಿಸಿದ್ದಾರೆ.
ಪುರುಷೋತ್ತಮ ಪೂಜಾರಿ ಈವರೆಗಿನ ಚಿಕಿತ್ಸೆಗೆ ಮಗಳ ಇಎಸ್ಐ ಸೌಲಭ್ಯದಿಂದ ಹಣ ಭರಿಸಿರುವುದು ಗಮನಕ್ಕೆ ಬಂದಿದೆ. ಮುಂದಿನ ಚಿಕಿತ್ಸೆಗಾಗಿ ಕುಟುಂಬಕ್ಕೆ ಒತ್ತಡ ಹಾಕದೇ, ಸಂಪೂರ್ಣ ವೆಚ್ಚವನ್ನು ಜಿಲ್ಲಾಡಳಿತ ಭರಿಸಲಿದೆ. ಅಲ್ಲದೆ, ಈವರೆಗಿನ ಇಎಸ್ಐ ಸೌಲಭ್ಯದಿಂದ ಪಡೆದಿರುವ ಆಸ್ಪತ್ರೆ ಮೊತ್ತವನ್ನು ಕುಟುಂಬಕ್ಕೆ ಹಿಂತಿರುಗಿಸುವುದಾಗಿ ಜಿಲ್ಲಾಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ. ನ.19ರಂದು ಕುಕ್ಕರ್ ಬ್ಲಾಸ್ಟ್ ಘಟನೆ ನಡೆದಿತ್ತು. ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ ಪೂಜಾರಿ(55) ಮತ್ತು ಕುಕ್ಕರ್ ಹಿಡಿದುಕೊಂಡಿದ್ದ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ಗಾಯಗೊಂಡಿದ್ದರು.





