ಮುಲ್ಕಿ: ಅನೈತಿಕ ಗೂಂಡಾಗಿರಿ ಪ್ರಕರಣ: ಮೂವರು ಆರೋಪಿಗಳ ಬಂಧನ
ಮಂಗಳೂರು: ಮುಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡು ಎಂಬಲ್ಲಿ ಭಿನ್ನಕೋಮಿನ ಯುವಕನ ಮೇಲೆ ನಡೆದ ಗುಂಪು ದಾಳಿ ಪ್ರಕರಣ ಸಂಬಂಧ ಮೂವರು ಸಂಘ ಪರಿವಾರ ಸಂಘಟನೆ ಕಾರ್ಯಕರ್ತರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಕೆರೆಕಾಡಿನ ಬೆಳ್ಳಾಯರು ಗ್ರಾಮದ ಸುಂದರ್ ದೇವಾಡಿಗ ಪುತ್ರ ದಿವ್ಯೇಶ್ ದೇವಾಡಿಗ 38), ರಾಜೇಶ್ ಕೆರೆಕಾಡು ಹಾಗೂ ಯೋಗೀಶ್ ಕುಮಾರ್ ಯಾನೆ ಯೋಗೀಶ್ (46) ಬಂಧಿತರು. ಇವರೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದು, ಸಂಘ ಪರಿವಾರ ಸಂಘಟನೆ ಕಾರ್ಯಕರ್ತರು ಎನ್ನಲಾಗಿದೆ.
ಶನಿವಾರ ಮಧ್ಯಾಹ್ನ ಕೆರೆಕಾಡು ಬಳಿ ಭಿನ್ನಕೋಮಿನ ಯುವಕನೊಬ್ಬ ಅಪ್ರಾಪ್ತ ಬಾಲಕಿ ಮುಂದೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಹಲ್ಲೆ ನಡೆಸಲಾಗಿತ್ತು. ಹಲ್ಲೆಗೊಳಗಾದ ಯುವಕನ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಅನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ವ್ಯಾಪಕ ಆಕ್ರೋಶ ಕೇಳಿ ಬಂದ ಹಿನ್ನೆಲೆ, ಗುಂಪು ಹಲ್ಲೆ ನಡೆಸಿದ ಸ್ಥಳೀಯ ಕಾರ್ಯಕರ್ತರ ಬಂಧನ ಪ್ರಕ್ರಿಯೆ ನಡೆದಿದೆ.




