ಕಾರ್ಕಳ: ಅಪಘಾತದಲ್ಲಿ ಗಾಯಾಳುವಿಗೆ ಆಸ್ಪತ್ರೆ ವೆಚ್ಚ ಭರಿಸುವುದಾಗಿ ನಂಬಿಸಿ ವಂಚನೆ: ಕೇಸು ದಾಖಲು
ಕಾರ್ಕಳ: ಅಪಘಾತದಲ್ಲಿ ಗಾಯಾಳುವಿಗೆ ಆಸ್ಪತ್ರೆ ವೆಚ್ಚ ಭರಿಸುತ್ತೇನೆಂದು ನಂಬಿಸಿ ವಂಚನೆಗೈದ ಆರೋಪದಡಿ ಬೈಕ್ ಸವಾರನೊಬ್ಬನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಬಿದಿರೆಯ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆಯ ನಿವಾಸಿ ಮಂದಾರ್(18) ಪ್ರಕರಣದ ದೂರುದಾರರು.
ಡಿಸೆಂಬರ್ 02ರಂದು ಘಟನೆ ನಡೆದಿದ್ದು, ಆಶೋಕ್ ಎಂಬವರೊಂದಿಗೆ ಮಂದಾರ್ ದ್ವಿಚಕ್ರ ವಾಹನದಲ್ಲಿ ಸಹಸವಾರನಾಗಿ ಕಾರ್ಕಳದ ಬಂಗ್ಲೆಗುಡ್ಡೆ-ಪುಲ್ಕೇರಿ ರಸ್ತೆಯಲ್ಲಿ ಎಡಬದಿಯಲ್ಲಿ ಮೂಡಬಿದ್ರೆಗೆ ಹೊರಟು ಹೋಗುತ್ತಿದ್ದಾಗ ದ್ವಿಚಕ್ರ ವಾಹನ ಸವಾರ ಅಶೋಕ್ನ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿ ವಾಹನ ರಸ್ತೆಗೆ ಮಗುಚಿ ಬಿದ್ದಿತ್ತು. ಅದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ಕಲ್ಲು ಸಹಸವಾರನ ಕಾಲಿಗೆ ತಾಗಿ ತೀವ್ರ ಸ್ವರೂಪದಲ್ಲಿ ಗಾಯವಾಗಿತ್ತು. ಘಟನೆಯಿಂದಾಗಿ ದ್ವಿಚಕ್ರ ವಾಹನವು ಜಖಂ ಗೊಂಡಿತ್ತು.
ಸ್ಥಳೀಯ ಟಿಎಂಎ ಪೈ ಆಸ್ಪತ್ರತೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆಗಾಗಿ, ಕಾರ್ಕಳ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿತ್ತು.
ಇನ್ನು ಆಸ್ಪತ್ರೆಯ ಖರ್ಚು ವೆಚ್ಚವನ್ನು ತಾನೇ ಭರಿಸುವುದಾಗಿ ಆಶೋಕ ಇದೇ ಸಂದರ್ಭದಲ್ಲಿ ವಾಗ್ದಾನ ನೀಡಿದ್ದನು. ವೈದ್ಯಕೀಯ ಖರ್ಚು ವೆಚ್ಚ ಜಾಸ್ತಿಯಾಗಿರುವುದರಿಂದ ಈವರೆಗೆ ಯಾವುದೇ ವೈದ್ಯಕೀಯ ಖರ್ಚು ವೆಚ್ಚಗಳನ್ನು ನೀಡದೇ ಸತಾಯಿಸಿದ್ದುದರಿಂದ ನೊಂದಿದ್ದ ಗಾಯಾಳು ಮಂದಾರ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.




