ವಾಹನಗಳ ಚಾಲಕರಿಂದ ಅಕ್ರಮವಾಗಿ ಹಣ ವಸೂಲು ಮಾಡುತ್ತಿದ್ದ ಆರ್ಟಿಒ: ಮಾಧ್ಯಮಗಳ ಕ್ಯಾಮೆರಾ ಕಂಡು ದಿಕ್ಕಾಪಾಲಾಗಿ ಓಡಿ ಹೋದ ಅಧಿಕಾರಿ
ಕೊಪ್ಪಳ: ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ (ಕೊಪ್ಪಳ ತಾಲ್ಲೂಕಿನ ಕೆರೆಹಳ್ಳಿ ಹತ್ತಿರ) ವಾಹನಗಳ ಚಾಲಕರಿಂದ ಅಕ್ರಮವಾಗಿ ಹಣ ವಸೂಲು ಮಾಡುತ್ತಿದ್ದ ಆರ್ಟಿಒ ಅಧಿಕಾರಿಗಳು ಮಾಧ್ಯಮಗಳ ಕ್ಯಾಮೆರಾಗಳನ್ನು ಕಂಡು ದಿಕ್ಕಾಪಾಲಾಗಿ ಓಡಿ ಹೋದರು.
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಗೆ ಶುಕ್ರವಾರ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಭೇಟಿ ನೀಡಿದ್ದರು. ಈ ಕಾರ್ಯಕ್ರಮದ ವರದಿಗೆ ತೆರಳಿ ವಾಪಸ್ ಬರುವಾಗ ವಾರ್ತಾ ಇಲಾಖೆಯ ವಾಹನವನ್ನು ಅಧಿಕಾರಿಗಳು ತಡೆದು ನಿಲ್ಲಿಸಿದರು. ಯಾಕೆಂದು ಪ್ರಶ್ನಿಸಿದಾಗ ಏನೂ ಉತ್ತರಿಸಲಿಲ್ಲ.
ಇದೇ ವೇಳೆ ಆರ್ಟಿಒ ಕಚೇರಿಯ ಬ್ರೇಕ್ ಇನ್ಸ್ಟೆಕ್ಟರ್ ಜವರೇಗೌಡ ಅವರಿಗೆ ಲಾರಿ ಚಾಲಕನೊಬ್ಬ ₹50 ಕೊಡಲು ಬಂದಾಗ ಮಾಧ್ಯಮ ಪ್ರತಿನಿಧಿಗಳು ಕ್ಯಾಮೆರಾದಲ್ಲಿ ಅದನ್ನು ದಾಖಲಿಸಲು ಮುಂದಾದರು. ಇದನ್ನು ಕಂಡ ಆರ್ಟಿಒ ಸಿಬ್ಬಂದಿ ಗಲಿಬಿಲಿಗೊಂಡು ರಸ್ತೆಯ ಪಕ್ಕದಲ್ಲಿದ್ದ ಹೊಲದಲ್ಲಿ ಓಡಿ ಹೋದರು. ಅವರನ್ನು ಮಾಧ್ಯಮದವರು ಬೆನ್ನಟ್ಟಿದಾಗ ಹಣ ತುಂಬಿದ ಚೀಲವನ್ನು ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದ ಚಿತ್ರಣ ಕಂಡುಬಂತು.




