ಕಡಬ: ಕದ್ದ ಅಡಿಕೆಯನ್ನು ಬಸ್ ಸ್ಟ್ಯಾಂಡ್ ನಲ್ಲೇ ಸುಲಿದು ಸಿಪ್ಪೆಯನ್ನು ಅಲ್ಲೇ ಬಿಟ್ಡು ಹೋದ ಕಳ್ಳರು
ಕಡಬ : ತಂಡವೊಂದು ತಡರಾತ್ರಿ ಅಡಿಕೆ ಕದ್ದು ಅದನ್ನು ಬಸ್ ಸ್ಟ್ಯಾಂಡ್ ನಲ್ಲೇ ಸುಲಿದು ಸಿಪ್ಪೆಯನ್ನು ಅಲ್ಲೇ ಹಾಕಿ ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಎಣ್ಮೂರಿನಲ್ಲಿ ಬೆಳಕಿಗೆ ಬಂದಿದೆ.
ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ಸ್ಟ್ಯಾಂಡಿನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು ಸ್ಥಳದಲ್ಲಿ ರಾಶಿ ಅಡಿಕೆ ಸಿಪ್ಪೆ, ನಾಲ್ಕೈದು ಅಡಿಕೆ, ಕಬ್ಬಿಣದ ರಾಡ್ ಪತ್ತೆಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸ್ಥಳಿಯ ಕಳ್ಳರದ್ದೇ ಕೃತ್ಯವಾಗಿರ ಬಹುದೆಂದು ಶಂಕಿಸಲಾಗಿದೆ. ಎಣ್ಮೂರಿನಲ್ಲಿ ಈ ಮೊದಲು ಬೀಟ್ ಪೊಲೀಸರ ರಾತ್ರಿ ಹೊತ್ತು ತಪಾಸಣೆ ಮಾಡುತ್ತಿದ್ದರು. ಆದರೆ ಇದೀಗ ಪೊಲೀಸರು ಅತ್ತ ಸುಳಿಯದಿರುವುದರಿಂದ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಡಿಕೆ ದರ ಏರುತ್ತಿರುವ ಬೆನ್ನಲ್ಲೇ ಅಡಿಕೆ ಕಳ್ಳರ ಹಾವಳಿ ಜೋರಾಗಿದ್ದು ಕೃಷಿಕ ವರ್ಗಕ್ಕೆ ಕಳ್ಳತನ ನಿಯಂತ್ರಿಸುವುದೇ ದೊಡ್ದ ಸವಾಲಾಗಿದೆ.
ಈ ಕೂಡಲೇ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.




