ಬಂಟ್ವಾಳ: ಕಾಮಗಾರಿ ವೇಳೆ ಸೇತುವೆ ಬಳಿ ಸಿಕ್ಕಿಹಾಕಿಕೊಂಡ ಟಿಪ್ಪರ್ ಲಾರಿ : ನೂತನ ಸೇತುವೆಯ ಕಾಮಗಾರಿ ವೇಳೆ ಘಟನೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನೂತನ ಸೇತುವೆಯ ಕಾಮಗಾರಿ ನಡೆಯುವ ನೇತ್ರಾವತಿ ನದಿಯ ಮಧ್ಯ ಭಾಗದಲ್ಲಿ ಟಿಪ್ಪರ್ ಲಾರಿಯೊಂದು ಸಿಲುಕಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದ್ದು, ಬಳಿಕ ಜೆಸಿಬಿ ಬಳಸಿಕೊಂಡು ಲಾರಿಯನ್ನು ದಡಕ್ಕೆ ಮುಟ್ಟಿಸಲಾಗಿದೆ.
ಬಿಸಿರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದ ಕೆ.ಎನ್.ಆರ್.ಸಿ. ಸಂಸ್ಥೆಯು ನೇತ್ರಾವತಿ ನೂತನ ಸೇತುವೆ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಂಡಿದೆ.
ಕಳೆದ ಮೇ ಅಂತ್ಯಕ್ಕೆ ಸೇತುವೆ ಪಿಲ್ಲರ್ ಕಾಮಗಾರಿ ಮುಕ್ಕಾಲು ಭಾಗ ಪೂರ್ಣಗೊಂಡಿದ್ದು, ಬಳಿಕ ಮಳೆಗಾಲದಲ್ಲಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು.
ಇದೀಗ ಮಳೆ ಕಡಿಮೆ ಆಗಿದ್ದು, ನೇತ್ರಾವತಿ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಕಾಮಗಾರಿಯನ್ನು ಪುನರಾರಂಭಿಸಲಾಗಿದೆ. ಪಿಲ್ಲರ್ ನಿರ್ಮಾಣಕ್ಕೆ ನೇತ್ರಾವತಿ ನದಿಯ ಒಂದು ಭಾಗದಿಂದ ನದಿಗೆ ಅಡ್ಡಲಾಗಿ ಮಣ್ಣು ಹಾಕಿ ನೀರನ್ನು ತಡೆಯಲಾಗುತ್ತದೆ.
ಆ ರೀತಿಯಲ್ಲಿ ಮಣ್ಣು ತುಂಬಿಸುವ ಕಾರ್ಯದಲ್ಲಿದ್ದಾಗ ಇಂದು ನೇತ್ರಾವತಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದೆ, ಮಣ್ಣು ಖಾಲಿ ಮಾಡಲು ಒಂದು ಭಾಗದಿಂದ ನದಿ ಮಧ್ಯ ಭಾಗಕ್ಕೆ ತೆರಳಿದ ಲಾರಿ ಮಣ್ಣು ಖಾಲಿ ಮಾಡಿ ವಾಪಸು ತೆರಳಬೇಕೆನ್ನುವಷ್ಟರಲ್ಲಿ ನದಿಯ ಮಧ್ಯ ಭಾಗದ ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಇದರಿಂದ ಲಾರಿ ಇನ್ನೊಂದು ಕಡೆಗೆ ದಾಟಲು ಸಾಧ್ಯ ವಾಗದೆ ಮಧ್ಯೆ ಸಿಲುಕಿಕೊಂಡಿತು. ಆ ಬಳಿಕ ಜೆಸಿಬಿ ಬಳಸಿ ಟಿಪ್ಪರ್ ನ್ನು ಎಳೆದು ರಸ್ತೆಗೆ ಕೊಂಡೊಯ್ಯಲಾಯಿತು.





