ವಿಟ್ಲ: ಕಾಂಗ್ರೆಸ್ ಮುಸ್ಲಿಂ ಪುಷ್ಟೀಕರಣ ಮಾಡುವ ಜತೆಗೆ ದೇಶದ ಅರಾಜಕತೆಗೆ ಕಾರಣವಾಗಿದೆ: ಶಾಸಕ ಸಂಜೀವ ಮಠಂದೂರು
ವಿಟ್ಲ: ಭಯೋತ್ಪಾದನೆಯನ್ನು ಹುಟ್ಟಿಹಾಕಲು ಕಾರಣವಾದ ಕಾಂಗ್ರೆಸ್ ಮುಸ್ಲೀಂ ಪುಷ್ಟೀಕರಣ ಮಾಡುವ ಜತೆಗೆ ದೇಶದ ಅರಾಜಕತೆಗೆ ಕಾರಣವಾಗಿದೆ. ಮೋದಿಯವರ ಆಡಳಿತದಿಂದ ದೇಶ ಸುಭದ್ರವಾಗಿದೆ. ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಅರಳುವಂತೆ ಮಾಡಿದ ಭಾರತೀಯ ಜನತಾ ಪಾರ್ಟಿ ಭಾರತದ ಭೌಗೋಳಿಕ ವ್ಯಾಪ್ತಿಗೆ ಮುಟ್ಟಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ವಿಟ್ಲ ಅಕ್ಷಯ ಸಮುದಾಯ ಭವನದಲ್ಲಿ ಬಿ.ಜೆ.ಪಿ. ಗ್ರಾಮಾಂತರ ಮಂಡಲ ವಿಟ್ಲ ಮಹಾಶಕ್ತಿ ಕೇಂದ್ರದ ಕಮಲ ದೀಪ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಪುತ್ತೂರಿನ ಹಿರಿಯ ವೈದ್ಯ ಡಾ. ಎಂ. ಕೆ. ಪ್ರಸಾದ್ ಭಂಡಾರಿ ಮಾತನಾಡಿ, ಹಣದ, ಅಧಿಕಾರದ ಆಸೆಯನ್ನು ಬಿಟ್ಟು ಹಿಂದುತ್ವಕ್ಕಾಗಿ ಕಾರ್ಯ ನಿರ್ವಹಿಸಬೇಕು. ಹಿಂದುತ್ವವನ್ನು ಉಳಿಸದಿದ್ದರೆ, ನಾವು ನೆಲೆ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯನ್ನು ಹೆಚ್ಚು ಮಾಡಿ ಪೆಟ್ರೋಲ್ ಉತ್ಪನ್ನಗಳ ಬೇಡಿಕೆ ಕಡಿಮೆಯಾಗುವುದರಿಂದ ಗಲ್ಫ್ ನ ಅಹಂಕಾರ ನಿಲ್ಲುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಲಂಚಮುಕ್ತವಾಗಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವಹಿಸಿದ್ದರು. ಪುತ್ತೂರಿನ ಹಿರಿಯ ವೈದ್ಯ ಡಾ. ಎಂ. ಕೆ. ಪ್ರಸಾದ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕಾರ್ಯಕರ್ತರಾದ ಸಂಕಪ್ಪ ಗೌಡ, ಜತ್ತಪ್ಪ ಗೌಡ ಹಾಗೂ 180 ಹಿರಿಯರಿಗೆ ಗೌರವಿಸಲಾಯಿತು.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದರೆ ಮಾತನಾಡಿದರು. ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಆರ್. ಸಿ. ನಾರಾಯಣ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತಿಶ್ ಶಾಂತಿವನ, ಯುವರಾಜ್, ಬೂಡಿಯಾರು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.
ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಎಂ. ವಿಟ್ಲ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಸಂಚಾಲಕ ರಾಮದಾಸ್ ಬಂಟ್ವಾಳ ಪ್ರಸ್ತಾವನೆಗೈದರು. ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು ವಂದಿಸಿದರು. ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.





