ಬಂಟ್ವಾಳ: ಪರವಾನಗಿ ರಹಿತ ಮರಳು ಸಾಗಾಟದ ಮೂರು ಲಾರಿಗಳು ಪೊಲೀಸ್ ವಶಕ್ಕೆ
ಬಂಟ್ವಾಳ: ಪರವಾನಗಿ ರಹಿತ ಮರಳು ಸಾಗಾಟದ ಮೂರು ಲಾರಿಗಳನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಎಸ್.ಐ.ಹರೀಶ್ ನೇತೃತ್ವದ ತಂಡ ವಶಕ್ಕೆ ಪಡೆದು ಕೊಂಡಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಡೇಶ್ವಾಲ್ಯ ಗ್ರಾಮದಿಂದ ಸಿ.ಆರ್.ಜಡ್ ವ್ಯಾಪ್ತಿಯಿಂದ ಪರವಾನಗಿ ಪಡೆದು ಮರಳು ತೆಗೆಯುವ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಬಳಿಕ ನದಿಯಿಂದ ತೆಗೆದ ಮರಳನ್ನು ಕಡೆಶ್ವಾಲ್ಯ ಹಾಗೂ ಬರಿಮಾರು ಗ್ರಾಮದಲ್ಲಿ ಹೀಗೆ ಎರಡು ಕಡೆಗಳಲ್ಲಿ ಮರಳು ಲೋಡ್ ಮಾಡಲು ವ್ಯವಸ್ಥೆ ಮಾಡಿದ್ದರು.
ಎರಡು ಕಡೆಗಳಿಂದ ಮರಳು ಲೋಡ್ ಮಾಡಿದ ಲಾರಿಗಳು ಕಾಗೆಕಾನ ಬಳಿಕ ಸೇರಾ ಮೂಲಕ ಬುಡೋಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಯನ್ನು ಸಂಪರ್ಕ ಮಾಡುತ್ತಿದ್ದವು, ಆದರೆ ಕಳೆದ ಕೆಲ ದಿನಗಗಳಿಂದ ಈ ರಸ್ತೆಯಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ರಸ್ತೆ ಬದಲಿಸಿದ ಮರಳು ಲಾರಿಗಳು ಬರಿಮಾರು ಎಂಬಲ್ಲಿಂದ ಲೋಡ್ ಮಾಡಿ ಅಲ್ಲಿಂದ ಬರಿಮಾರಿನಿಂದ ಸೂರಿಕುಮೇರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಯನ್ನು ಸಂಪರ್ಕ ಮಾಡುತ್ತಿದ್ದು, ಇದರಿಂದ ರಸ್ತೆ ಕೆಡುತ್ತದೆ ಎಂಬ ಆರೋಪ ಹೊರಿಸಿ ಲಾರಿಯನ್ನು ಇಲ್ಲಿನ ಸ್ಥಳೀಯರು ತಡೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಎಸ್. ಐ. ಹರೀಶ್ ಅವರು ಸ್ಥಳದಲ್ಲಿದ್ದ ಮರಳು ತುಂಬಿದ ಎರಡು ಲಾರಿಗಳನ್ನು ಹಾಗೂ ಅಲ್ಲೇ ನಿಂತುಕೊಂಡಿದ್ದ ಖಾಲಿ ಲಾರಿ ಸೇರಿದಂತೆ ಒಟ್ಟು ಮೂರು ಲಾರಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮರಳು ಸಾಗಾಟಕ್ಕೆ ಲಾರಿಗಳಿಗೆ ಅನುಮತಿ ಇಲ್ಲ ಎಂಬುದು ದೃಡಪಟ್ಟಿದೆ.




