ಕಾಮಗಾರಿಗಳಿಗೆ ಪರ್ಸೆಂಟೇಜ್ ಕೇಳಿದ ಪಿಡಿಒ ಅಮಾನತು
ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿಯ ವಿವಿಧ ಕಾಮಗಾರಿಗಳಿಗೆ ಮೊಬೈಲ್ನಲ್ಲೆ ಪರ್ಸೆಂಟೇಜ್ ವ್ಯವಹಾರ ಕುದುರಿಸುತ್ತಿದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲು ರಾಯಚೂರು ಸಿಇಓ ಶಶಿಧರ್ ಕುರೇರಾ ಆದೇಶ ಹೊರಡಿಸಿದ್ದಾರೆ.
ಪಿಡಿಓ (PDO) ಪರ್ಸೆಂಟೆಜ್ ವ್ಯವಹಾರದ ಬಗ್ಗೆ ಪಬ್ಲಿಕ್ ಟಿವಿ ಸವಿವರವಾದ ವರದಿಯನ್ನು ಪ್ರಸಾರ ಮಾಡಿತ್ತು. ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳ ಪಿಡಿಓ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಪಾಮನಕಲ್ಲೂರು ಗ್ರಾಪಂ ಪಿಡಿಓ ಆಗಿದ್ದ ಅಮರೇಶ್ ತೋರಣದಿನ್ನಿ ಗ್ರಾ.ಪಂಗೆ ಪ್ರಭಾರಿ ಪಿಡಿಓ ಆಗಿಯೂ ಕೆಲಸ ಮಾಡುತ್ತಿದ್ದ. ಎರಡೂ ಪಂಚಾಯತಿಗಳಲ್ಲೂ ಕರ್ತವ್ಯ ಲೋಪ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿರುವ ಆರೋಪ ಎದುರಿಸುತ್ತಿದ್ದ
ಕಾಮಗಾರಿಯೊಂದಕ್ಕೆ ಸಂಬಂಧಪಟ್ಟಂತೆ ನಡುರಸ್ತೆಯಲ್ಲೇ ಮೊಬೈಲ್ನಲ್ಲಿ ತನ್ನ ಪರ್ಸೆಂಟೇಜ್ ಬಗ್ಗೆ ಮಾತನಾಡಿದ್ದ ವೀಡಿಯೋ ವೈರಲ್ ಆಗಿತ್ತು. ಈ ಕುರಿತು ನೀಡಿದ್ದ ಕಾರಣ ಕೇಳಿ ನೋಟಿಸ್ಗೆ ಅಮರೇಶ್ ಉತ್ತರಿಸಿರಲಿಲ್ಲ. ಹೀಗಾಗಿ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೆರಾ ಪಿಡಿಓ ಅಮರೇಶ್ನನ್ನ ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ.




