February 3, 2026

ಜಮೀನು ಅಭಿವೃದ್ಧಿ ಸಾಲದ ಹೆಸರಿನಲ್ಲಿ ವಂಚನೆ; ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು : ಆರೋಪಿಗಳ ಬಂಧನಕ್ಕೆ ಒತ್ತಾಯ.

0
image_editor_output_image331485424-1662463403584.jpg

ಬೆಳ್ತಂಗಡಿ:ಜಮೀನು ಅಭಿವೃದ್ಧಿ ಬ್ಯಾಂಕ್ ಸಾಲ ಮಾಡಿಕೊಡುವ ನೆಪದಲ್ಲಿ ಆದಿವಾಸಿ ಸಮುದಾಯದ ವ್ಯಕ್ತಿಯಾದ ನನ್ನ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದ್ದು , ಈ ಬಗ್ಗೆ ಪ್ರಕರಣ ದಾಖಲಾಗಿದ್ದು , ನನಗೆ ಮೋಸ, ವಂಚನೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಜೈಲಿಗಟ್ಟಬೇಕು ಎಂದು ಉಜಿರೆ ಗ್ರಾಮದ ಕಾಂತಪ್ಪ ನಾಯ್ಕ ಒತ್ತಾಯಿಸಿದರು.

ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಾನು ಅವಿದ್ಯಾವಂತನಾಗಿದ್ದು , ಕೇವಲ ಸಹಿ ಮಾಡಲು ಮಾತ್ರ ಗೊತ್ತಿದೆ. ಈ ವಿಚಾರ ತಿಳಿದುಕೊಂಡ ಧರ್ಮಸ್ಥಳ ಗ್ರಾಮದ ಮಂಜಿಹಿತ್ಲು ರಾಜೇಶ್ ಆರ್ ಶಣೈ ಎಂಬಾತ ನನ್ನ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡು ಜಮೀನು ಅಭಿವೃದ್ಧಿ ಪಡಿಸಲು ಸಾಲ ನೀಡುವುದಾಗಿ ಹೇಳಿ ನನ್ನ ಬಾಬ್ತು ಇರುವ ಸ.ನಂ 265/11 ರಲ್ಲಿರುವ 1.84 ಎಕರೆ ಜಮೀನನ್ನು ಅಧಿಕಾರ ಪತ್ರ ಮಾಡಿಸಿಕೊಂಡಿದ್ದಾರೆ.

ಸ.ನಂ 265/26 ರಲ್ಲಿನ 0.42 ಎಕರೆ ಜಮೀನನ್ನು ನೋಂದಾಯಿತ ಕ್ರಯಸಾಧನ ಮಾಡಿಕೊಂಡಿದ್ದಾರೆ. ಸಾಲದ ಬರವಸೆ ನೀಡಿದ ಕಾರಣಕ್ಕಾಗಿ ಎಲ್ಲಾ ದಾಖಲೆಗಳಿಗೂ ನಾನು ಸಹಿ ಹಾಕಿರುತ್ತೇನೆ.ನನ್ನ ಜಮೀನಿನ ದಾಖಲೆಗಳನ್ನು ದುರುಪಯೋಗ ಮಾಡಿಕೊಂಡ ರಾಜೇಶ್ ಆರ್ ಶಣೈ ಎಂಬಾತ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಕಾರ್ಯಚರಿಸುತ್ತಿರುವ ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ (ನಿ) ಎಂಬ ಹಣಕಾಸು ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ಮೂಲಕ ನನ್ನ ಜಮೀನಿನ ಮೇಲೆ ಕಾನೂನು ಬಾಹಿರವಾಗಿ 20,00,000/- ಸಾಲ ಪಡೆದುಕೊಂಡಿರುತ್ತಾರೆ. ಒಂದೇ ಒಂದು ರೂಪಾಯಿ ಹಣ ನನಗೆ ನೀಡಿರುವುದಿಲ್ಲ. ನನ್ನ ಬ್ಯಾಂಕ್ ಚೆಕ್ ಮೂಲಕ ರಾಜೇಶ್ ಶಣೈ ಹಣ ಪಡೆದುಕೊಂಡಿದ್ದಾನೆ. ಈ ಮೇಲಿನ ಹಣಕಾಸು ಸಂಸ್ಥೆಗೆ ಯಾವುದೇ ಕೃಷಿ ಜಮೀನುಗಳಿಗೆ ಸಾಲ ನೀಡಲು ಕಾನೂನು ಪ್ರಕಾರ ಅಧಿಕಾರ ಇಲ್ಲದಿದ್ದರೂ ನನ್ನನ್ನು ವಂಚಿಸುವ ಉದ್ದೇಶದಿಂದ ರಾಜೇಶ್ ಶಣೈ ಎಂಬಾತನೊಂದಿಗೆ ಮೇಲಿನ ಹಣಕಾಸು ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದರು.

ರಾಜೇಶ್ ಶಣೈ ನನ್ನ ಹೆಸರಿನ ಜಮೀನಿನ ದಾಖಲೆಗಳನ್ನು ಇಟ್ಟು ಉಜಿರೆಯ ಎರಡು ಬ್ಯಾಂಕುಗಳಲ್ಲಿ ಕ್ರಮವಾಗಿ 15,00,000/- ಮತ್ತು 10,00,000/- ದಂತೆ ಒಟ್ಟು 25 ಲಕ್ಷ ಸೇರಿದಂತೆ 45,00,000/- ರೂಪಾಯಿಗಳನ್ನು ಸಾಲವಾಗಿ ಪಡೆಯಲಾಗಿದೆ. ನನ್ನ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡು ಜಮೀನು ಲಪಾಟಯಿಸಲು ಹುನ್ನಾರ ನಡೆಸಿದ ರಾಜೇಶ್ ಶಣೈ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ರಾಜೇಶ್ ಶಣೈ ನನ್ನ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಜಿಪಿಎ ಹಾಗೂ ಕ್ರಯಸಾಧನ ಮಾಡಿಕೊಂಡಿರುವ ವಿಚಾರ ತಿಳಿದ ನಂತರ ಬೆಳ್ತಂಗಡಿ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಜಿಪಿಎ ಹಾಗೂ ಕ್ರಯಸಾಧನವನ್ನು ರದ್ದು ಮಾಡಲಾಯಿತು. ಆ ಬಳಿಕವೂ ಹಣಕಾಸು ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ನನ್ನ ಜಮೀನನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಮುಂದಾಗಿರುವುದು ಅತ್ಯಂತ ಖಂಡನೀಯ.

ಈ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಅ.ಕ್ರ 55/2022 ರಂತೆ ಕಲಂ 420 , 423 , 447 , 34 IPC ಹಾಗೂ ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ 2015 ಯಡಿ 3(1)(F) ರಂತೆ ದಿನಾಂಕ 31-8-2022 ರಂದು ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾಗಿ ಒಂದು ವಾರ ಕಳೆದರೂ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಬೆಳ್ತಂಗಡಿ ಪೋಲಿಸರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ‌. ತಕ್ಷಣ ಆರೋಪಿಗಳನ್ನು ಬಂಧಿಸಬೇಕು , ಕಾನೂನು ಬಾಹಿರವಾಗಿ ಕೃಷಿ ಜಮೀನಿಗೆ ಸಾಲ ನೀಡಿದ ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ (ನಿ) ವನ್ನು ಸಹಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಆ ಹಣಕಾಸು ಸಂಸ್ಥೆಯನ್ನು ಸರ್ಕಾರ ತನ್ನ ಸ್ವಾಧೀನ ಪಡಿಸಿಕೊಳ್ಳಬೇಕು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ , ಕಾಂತಪ್ಪ ನಾಯ್ಕರವರ ಪತ್ನಿ ಗಿರಿಜಾ , ಪುತ್ರರಾದ ನಾಗೇಶ್ , ಹರೀಶ್ , ಅಣ್ಣನ ಮಗ ಸಂಜೀವ ನಾಯ್ಕ , ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!