ಕಾಲುವೆಗೆ ಉರುಳಿದ ಟಾಟಾ ಇಂಡಿಗೋ ಕಾರು: ಕಾರಿನಲ್ಲಿದ್ದ ಮೂವರು ಜಲಸಮಾಧಿ
ಮಸ್ಕಿ (ರಾಯಚೂರು ಜಿಲ್ಲೆ): ಮಸ್ಕಿ ಪಟ್ಟಣ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಗೆ (ಟಿಎಲ್ಬಿಸಿ) ಟಾಟಾ ಇಂಡಿಗೋ ಕಾರು ಮಂಗಳವಾರ ಬೆಳಿಗ್ಗೆ ಉರುಳಿದ್ದು, ಮೂವರು ಜಲಸಮಾಧಿ ಆಗಿದ್ದಾರೆ.
ಆಂಧ್ರ ಪಾಸಿಂಗ್ ಕಾರು ನೆಕ್ಕಂಟಿ ಶ್ರೀನಿವಾಸ್ ಎಂಬುವರಿಗೆ ಸೇರಿದೆ. ಮಹಿಳೆ ಸೇರಿ ಇಬ್ಬರ ಶವವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಚಾಲಕ ಕೊಚ್ಚಿ ಹೋಗಿದ್ದು ಪತ್ತೆಕಾರ್ಯ ನಡೆದಿದೆ. ಇನ್ನೂ ಗುರುತು ಪತ್ತೆಯಾಗಿಲ್ಲ.
ಟ್ರ್ಯಾಕ್ಟರ್ ಹಾಗೂ ಕ್ರೇನ್ ಸಹಾಯದಿಂದ ಕಾರು ಹೊರತೆಗೆಯಲಾಗುತ್ತಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲುವೆ ಬಳಿ ಜನಜಂಗುಳಿ ನೆರೆದಿದೆ.




