ಕಡಬ: ಅನಾರೋಗ್ಯ ಪೀಡಿತ ವೃದ್ಧೆಯನ್ನು ಹೊತ್ತುಕೊಂಡು ಹೋದ ಪ್ರಕರಣಕ್ಕೆ ತಿರುವು: ಅದೇ ಮನೆಯಿಂದ ಜೀಪ್ ಪತ್ತೆ, ವಿಡಿಯೋ ವೈರಲ್
ಸುಬ್ರಹ್ಮಣ್ಯ: ಕೆಲ ದಿನಗಳ ಹಿಂದೆ ಅನಾರೋಗ್ಯ ಪೀಡಿತ ವೃದ್ಧೆಯನ್ನು ಹೊತ್ತುಕೊಂಡು ಸಾಗಾಟ ನಡೆಸಿದ ಪ್ರಕರಣದಲ್ಲಿ ಇದೀಗ ತಿರುವು ಪಡೆದಿದ್ದು, ಅದೇ ಮನೆಯಿಂದ ಜೀಪಿನಲ್ಲಿ ಅಡಿಕೆ ಸಾಗಾಟ ನಡೆಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ವಿಡಿಯೋ ಮತ್ತೆ ವೈರಲ್ ಆಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳಕ್ಕ ಎಂಬಲ್ಲಿ ರಸ್ತೆ ಸರಿ ಇಲ್ಲದೆ ಕಮಲ ಎಂಬ 70 ವರ್ಷದ ವೃದ್ಧೆಯನ್ನು ಬಡಿಗೆಗೆ ಬಟ್ಟೆ ಕಟ್ಟಿ ಆಸ್ಪತ್ರೆಗೆ ಸಾಗಾಟ ನಡೆಸಿದ್ದರು. ರಸ್ತೆ ಸಂಪರ್ಕ ವ್ಯವಸ್ಥಿತವಾಗಿಲ್ಲ ಎಂಬ ಆರೋಪ ವ್ಯಕ್ತವಾಗಿ ರಾಜ್ಯವಾಪಿ ಸುದಿಯಾಗಿತ್ತು. ಇದೀಗ ಗುರುವಾರ ವೃದ್ಧೆಯ ಮನೆಯಿಂದಲೇ ಅಡಿಕೆಯನ್ನು ಜೀಪಿನಲ್ಲಿ ಸಾಗಾಟ ನಡೆಸಿದ ವೇಳೆ ಸ್ಥಳೀಯರು ತಡೆ ಹಿಡಿದು ತರಾಟೆಗೆ ತೆಗೆದುಕೊಂಡರು.
2-3 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದರೂ ಅಡಿಕೆ ಸಾಗಾಟಕ್ಕೆ ಟೂ ವೀಲ್ ಜೀಪು ಬಳಿಸಿದ್ದೀರಾ, ಮೊನ್ನೆ ವೃದ್ಧೆಯನ್ನು ಹೊತ್ತುಕೊಂಡು ಸಾಗಿಸುತ್ತಾ ರಸ್ತೆ ಸರಿಯಿಲ್ಲ ಎಂದು ಅಪಪ್ರಚಾರ ನಡೆಸಿದ್ದೀರಾ ಎಂದು ಸ್ಥಳೀಯರು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿದೆ. ಸ್ಥಳೀಯ ಶಾಸಕರ ಹಾಗೂ ನೂಜಿಬಾಳ್ತಿಲ ಗ್ರಾ.ಪಂ. ಬಗ್ಗೆ ತೇಜೋವಧೆ ನಡೆಸಲು ಮೊನ್ನೆ ನಡೆಸಲಾದ ವ್ಯವಸ್ಥಿತ ಸಂಚು ಎಂದು ಸ್ಥಳೀಯ ಗ್ರಾ.ಪಂ. ಸದಸ್ಯರು ಆರೋಪಿಸಿದ್ದಾರೆ. ಅಡಿಕೆಯನ್ನು ಜೀಪಿನಲ್ಲಿ ಸಾಗಿಸಿದ್ದೀರಾ, ವೃದ್ಧೆಯನ್ನು ಯಾವ ಕಾರಣಕ್ಕೆ ಹೊತ್ತುಕೊಂಡು ಸಾಗಿಸಿದ್ದೀರಾ ಎಂದು ಸ್ಥಳೀಯರು ಈ ವೇಳೆ ಪ್ರಶ್ನಿಸಿದ್ದಾರೆ.




