“ಜತೆಗಿರುವನು ಚಂದಿರ” ನಾಟಕಕ್ಕೆ ಬಜರಂಗದಳ, ಅರೆಸ್ಸೆಸ್ ಕಾರ್ಯಕರ್ತರಿಂದ ಅಡ್ಡಿ
ಶಿವಮೊಗ್ಗ: ಸೊರಬ ತಾಲ್ಲೂಕಿನ ಆನವಟ್ಟಿಯ ವೀರಶೈವ ಕಲ್ಯಾಣ ಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಜತೆಗಿರುವನು ಚಂದಿರ’ ನಾಟಕಕ್ಕೆ ಮುಸ್ಲಿಂ ಪ್ರಧಾನ ಕಥಾಹಂದರ ಹೊಂದಿದೆ ಎಂದು ಆರೋಪಿಸಿ ಬಜರಂಗದಳ ಹಾಗೂ ಆರ್ಎಸ್ಎಸ್ ಕಾರ್ಯಕರ್ತರು ಅಡ್ಡಿಪಡಿಸಿದರು. ಇದರಿಂದಾಗಿ ಸಂಘಟಕರು ಅನಿವಾರ್ಯವಾಗಿ ನಾಟಕ ಪ್ರದರ್ಶನ
ವನ್ನು ಅರ್ಧದಲ್ಲಿಯೇ ನಿಲ್ಲಿಸಿದರು.
ಜೋಸೆಫ್ ಸ್ಟೀನ್ ಅವರ ‘ಪಿಡ್ಲರ್ ಆನ್ ದಿ ರೂಫ್’ ನಾಟಕವನ್ನು ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ರೂಪಾಂತರ ಮಾಡಿದ್ದರು. ಅದನ್ನು ಶಿವಮೊಗ್ಗದ ರಂಗಬೆಳಕು ತಂಡವು ರಂಗಕ್ಕೆ ತಂದಿತ್ತು. ಈ ನಾಟಕದ ಪ್ರಯೋಗ ಭಾನುವಾರ ಆನವಟ್ಟಿಯಲ್ಲಿ ಆಯೋಜಿಸಲಾಗಿತ್ತು. ರಾತ್ರಿ 7.45ಕ್ಕೆ ನಾಟಕ ಆರಂಭವಾಗಿತ್ತು.
9.30ರ ಹೊತ್ತಿಗೆ ಆರ್ಎಸ್ಎಸ್ನ ಶ್ರೀಧರ ಆಚಾರ್, ಬಜರಂಗದಳದ ಮಂಜಣ್ಣ ಸಭಾಂಗಣದ ಒಳಗೆ ಬಂದಿದ್ದು, ಸಂಜಯ್ ಡೊಂಗ್ರೆ ಎಂಬುವವರು ಹೊರಗಡೆ ನಿಂತಿದ್ದರು.
‘ಬೋಲೊ ಭಾರತ್ ಮಾತಾಕಿ ಜೈ’, ‘ಜೈ ಹಿಂದ್’ ಘೋಷಣೆಗಳನ್ನು ಕೂಗಿದ ಅವರು, ನಾಟಕವನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಪ್ರೇಕ್ಷಕರನ್ನು ಒತ್ತಾಯಪೂರ್ವಕವಾಗಿ ಹೊರಗೆ ಕಳುಹಿಸಿದರು. ಹೀಗಾಗಿ ಸಂಘಟಕರು ನಾಟಕವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದರು.




