ಹಿಡಿತವಿಲ್ಲದ ನಾಲಿಗೆ ಇಡೀ ದೇಶಕ್ಕೇ ಬೆಂಕಿ ಹಚ್ಚಿದೆ, ನೂಪುರ್ ಶರ್ಮಾ ದೇಶದ ಕ್ಷಮೆಯಾಚಿಸಬೇಕು: ಸುಪ್ರೀಂ ಕೋರ್ಟ್
ನವದೆಹಲಿ: ಪ್ರವಾದಿ ಮಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
‘ಅವರ ಹಿಡಿತವಿಲ್ಲದ ನಾಲಿಗೆ ಇಡೀ ದೇಶಕ್ಕೇ ಬೆಂಕಿ ಹಚ್ಚಿದೆ. ದೇಶದ ಭದ್ರತೆಗೇ ಆತಂಕ ಉಂಟುಮಾಡಿದೆ’ ಎಂದು ಕಳವಳ ವ್ಯಕ್ತಪಡಿಸಿರುವ ಪೀಠ, ಶರ್ಮಾ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದೆ.
ಪ್ರವಾದಿ ಕುರಿತು ತಾವು ನೀಡಿರುವ ಹೇಳಿಕೆಯನ್ನು ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್ಐಆರ್ಗೆ ಸಂಬಂಧಿಸಿದ ವಿಚಾರಣೆಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ಶರ್ಮಾ ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠ, ಮನವಿಯನ್ನು ತಿರಸ್ಕರಿಸಿದ್ದು, ಅರ್ಜಿ ಹಿಂಪಡೆಯಲು ಕಾಲಾವಕಾಶ ನೀಡಿದೆ.
ಪ್ರವಾದಿ ಕುರಿತ ಶರ್ಮಾ ಹೇಳಿಕೆ ತುಂಬಾ ಗೊಂದಲ ಮತ್ತು ದುರಹಂಕಾರದಿಂದ ಕೂಡಿದ್ದಾಗಿದೆ. ಅವರಿಗೆ ಅಂತಹ ಹೇಳಿಕೆ ನೀಡುವ ಅಗತ್ಯವೇನಿತ್ತು? ಇದು ದೇಶದಲ್ಲಿ ದುರದೃಷ್ಟಕರ ಘಟನೆಗಳಿಗೆ ಕಾರಣವಾಗಿದೆ. ಇಂಥವರಿಗೆ ಇತರ ಧರ್ಮಗಳ ಬಗ್ಗೆ ಗೌರವವಿಲ್ಲ. ಅಗ್ಗದ ಪ್ರಚಾರಕ್ಕಾಗಿ ಅಥವಾ ರಾಜಕೀಯ ಅಜೆಂಡಾ ಅಥವಾ ಇತರ ದುರುದ್ದೇಶಗಳಿಗಾಗಿ ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ಪೀಠವು ವಿಚಾರಣೆಯ ಸಮಯದಲ್ಲಿ ಹೇಳಿದೆ.




