ಬೆಳಗಾವಿ: ತಾಯಿ, ಇಬ್ಬರು ಪುಟ್ಟ ಮಕ್ಕಳ ಕೊಲೆ ಪ್ರಕರಣ: ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದ ಕೋರ್ಟ್
ಬೆಳಗಾವಿ: ತಾಯಿ ಹಾಗೂ ಇಬ್ಬರು ಪುಟ್ಟ ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಭಟ್ ನನ್ಮು ಧಾರವಾಡದ ಹೈಕೋರ್ಟ್ ಪೀಠ ನಿರ್ದೋಷಿ ಎಂದು ತೀರ್ಪು ನೀಡಿದೆ.
ದೇಶದಾದ್ಯಂತ ದೊಡ್ಡ ಸದ್ದು ಮಾಡಿದ್ದ ಈ ತ್ರಿವಳಿ ಕೊಲೆ ಪ್ರಕರಣದಲ್ಲಿ ಬೆಳಗಾವಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ, ಹೈಕೋರ್ಟ್ ದ್ವಿಸದಸ್ಯ ಪೀಠವು ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ನೀಡಿ, ಆರೋಪಿಯನ್ನು ಬಿಡುಗಡೆ ಮಾಡಿದೆ.
ರಾಜ್ಯದ ಜನರನ್ನು ಬೆಚ್ಚಿಬೀಳಿಸಿದ್ದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಂತಾಗಿದೆ.
2015ರ ಆಗಸ್ಟ್ 16ರಂದು ನಸುಕಿನ ಜಾವ ಇಲ್ಲಿನ ಕುವೆಂಪು ನಗರದ ಮನೆಯಲ್ಲಿ ತ್ರಿವಳಿ ಕೊಲೆ ನಡೆದಿತ್ತು.
ಗೃಹಿಣಿ ರೀನಾ ಮಾಲಗತ್ತಿ, ಅವರ ಮಕ್ಕಳಾದ ಆದಿತ್ಯ ಹಾಗೂ ಸಾಹಿತ್ಯ ಅವರನ್ನು ಬೆಡ್ ರೂಮಿನಲ್ಲೇ ಕೊಲೆ ಮಾಡಲಾಗಿತ್ತು. ರೀನಾ ಅವರೂಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರವೀಣ್ ಭಟ್ ಈ ಕೊಲೆ ಮಾಡಿದ್ದಾಗಿ, ರೀನಾ ಅವರ ಸಹೋದರ ದೂರು ದಾಖಲಿಸಿದ್ದರು.
ಪೊಲೀಸರು 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಬೆಳಗಾವಿಯ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2018ರ ಏಪ್ರಿಲ್ 16ರಂದು ಪ್ರವೀಣ್ ಭಟ್ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಆದರೆ, ಈ ಆದೇಶವನ್ನು ತಡೆಹಿಡಿದ ಧಾರವಾಡ ಹೈಕೋರ್ಟ್ ಪೀಠವು, ಇದೇ ಜೂನ್ 21ರಂದು ಆರೋಪಿಯನ್ನು ಖುಲಾಸೆ ಮಾಡಿದೆ.




