ಪ್ರವಾದಿ ನಿಂದನೆ ಬಗ್ಗೆ ವ್ಯಾಪಕ ಆಕ್ರೋಶ ಹಿನ್ನೆಲೆ: ಇಬ್ಬರು ಪಕ್ಷದ ವಕ್ತಾರರನ್ನು ವಜಾ ಮಾಡಿದ ಬಿಜೆಪಿ
ನವದೆಹಲಿ: ಪ್ರವಾದಿ ಮೊಹಮ್ಮದ್ (Prophet Mohammed) ವಿರುದ್ಧ ಪಕ್ಷದ ವಕ್ತಾರೆ ನೂಪುರ್ ಶರ್ಮಾ (Nupur Sharma) ನೀಡಿರುವ ವಿವಾದಾತ್ಮಕ ಹೇಳಿಕೆಗಳಿಂದ ಭಾರತೀಯ ಜನತಾ ಪಕ್ಷ (BJP) ಅಂತರ ಕಾಯ್ದುಕೊಂಡಿದೆ. ನವೀನ್ ಜಿಂದಲ್ ಮತ್ತು ನೂಪುರ್ ಶರ್ಮ ಅವರನ್ನು ಪಕ್ಷದಿಂದ ವಜಾಗೊಳಿಸಿದೆ.
ಪಕ್ಷದ ರಾಷ್ಟ್ರೀಯ ವಕ್ತಾರೆಯನ್ನೇ ಪಕ್ಷದ ಪ್ರಾಥಮಿಕ ಸದಸ್ಯತದಿಂದ ವಜಾಗೊಳಿಸಿದೆ. ಅರಬ್ ದೇಶಗಳಲ್ಲಿ ಭಾರತದ ವಸ್ತುಗಳ ಬಹಿಷ್ಕಾರ ಪ್ರಾರಂಭವಾಗಿದೆ.
ಯಾವುದೇ ಪಂಗಡ ಅಥವಾ ಧರ್ಮವನ್ನು ಅವಮಾನಿಸುವ ಯಾವುದೇ ಸಿದ್ಧಾಂತವನ್ನು ಪಕ್ಷವು ಬಲವಾಗಿ ವಿರೋಧಿಸುತ್ತದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಭಾರ ಮುಖ್ಯ ಕಾರ್ಯದರ್ಶಿ ಅರುಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಪಕ್ಷದ ವಕ್ತಾರರು ಹೇಳಿಕೆಗಳಿಂದ ಆಕ್ರೋಶಗೊಂಡ ಮುಸ್ಲಿಂ ಗುಂಪುಗಳ ಪ್ರತಿಭಟನೆಯ ನಡುವೆ ಬಿಜೆಪಿ ವಿವಾದವನ್ನು ಶಮನಗೊಳಿಸಲು ಪ್ರಯತ್ನಿಸಿದೆ. ಶುಕ್ರವಾರದ ಪ್ರಾರ್ಥನೆಯ ನಂತರ ಕಾನ್ಪುರ ನಗರದ ಪರೇಡ್, ನಯಿ ಸಡಕ್ ಮತ್ತು ಯತೀಂಖಾನಾ ಪ್ರದೇಶಗಳಲ್ಲಿ ಪ್ರಮುಖ ಘರ್ಷಣೆಗಳು ಭುಗಿಲೆದ್ದ ನಂತರ ವಿವಾದವು ಹಿಂಸಾಚಾರಕ್ಕೆ ತಿರುಗಿತು.
ಇತ್ತೀಚೆಗೆ ಟಿವಿ ಚರ್ಚೆಯೊಂದರಲ್ಲಿ ನೂಪುರ್ ಶರ್ಮಾ ಅವರು ಮಾಡಿದ ಅವಮಾನಕರ ಹೇಳಿಕೆಗಳನ್ನು ಖಂಡಿಸಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.ಬಿಜೆಪಿಯು ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧಾರ್ಮಿಕ ವ್ಯಕ್ತಿತ್ವವನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪಕ್ಷವು ಅಂತಹ ಜನರನ್ನು ಅಥವಾ ಅವರ ಹೇಳಿಕೆಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಅರುಣ್ ಸಿಂಗ್ ಹೇಳಿದರು.





