ಬಸ್ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ: ಬಸ್ ಕಿಟಕಿ ಗಾಜು ಒಡೆದ ದುಷ್ಕರ್ಮಿಗಳು
ವಿಜಯಪುರ: ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ತೆಲುಗರಿಂದ ಕನ್ನಡಿಗರ ಮೇಲೆ ದೌರ್ಜನ್ಯ ಮುಂದುವರೆದಿದ್ದು, ಕಾರಣವೇ ಇಲ್ಲದೇ ಆಂಧ್ರಪ್ರದೇಶದ ಶ್ರೀಶೈಲ ಶ್ರೀಕ್ಷೇತ್ರದಲ್ಲಿ ಬಸ್ ಚಾಲಕ, ನಿರ್ವಾಹಕರ ಮೇಲೆ ದಾಳಿ ನಡೆಸಿದ್ದು, ಬಸ್ ಕಿಟಕಿ ಗಾಜು ಒಡೆದು ದೌರ್ಜನ್ಯ ಎಸಗಿದ ಘಟನೆ ವರದಿಯಾಗಿದೆ.
ಘಟನೆಯಲ್ಲಿ ವಿಜಯಪುರ ಬಸ್ ಚಾಲಕ ಬಸವರಾಜ ಬಿರಾದಾರ ಮುಖ, ಕಾಲಿಗೆ ಗಂಭೀರ ಗಾಯಗಳಾಗಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ಘಟಕಕ್ಕೆ ಸೇರಿದ ಬಸ್ ಶ್ರೀಶೈಲ ಕ್ಷೇತ್ರಕ್ಕೆ ತೆರಳಿತ್ತು. ಜೂನ್ 2 ರಂದು ಮಧ್ಯ ರಾತ್ರಿ ಶ್ರೀಶೈಲದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ- ನಿರ್ವಾಹಕ ಮಲಗಿದ್ದರು.
ಮಧ್ಯ ರಾತ್ರಿ ಏಕಾಏಕಿ ಆಗಮಿಸಿದ ಸುಮಾರು 12 ಜನರಿದ್ದ ತಂಡ ಚಾಲಕ, ಕಂಡಕ್ಟರ್ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಬಸ್ ನ ಕಿಟಕಿ ಗಾಜು ಒಡೆದು, ಕನ್ನಡಿಗರ ಬಗ್ಗೆ ಅಶ್ಲೀಲವಾಗಿ ನಿಂದಿಸಿ, ಪುಂಡರ ಗುಂಪು ಬೆದರಿಕೆ ಹಾಕಿದೆ.
ದಾಳಿಯ ವೇಳೆ ಚಾಲಕ ಬಸವರಾಜ ಚೀರಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಇತರೆ ವಾಹನಗಳ ಚಾಲಕ, ಕಂಡಕ್ಟರ್ಗಳು ಬಸವರಾಜ ಅವರ ರಕ್ಷಣೆಗಾಗಿ ಓಡಿ ಬಂದಿದ್ದಾರೆ. ಇದನ್ನು ಕಂಡ ಪುಂಡರು ಅಲ್ಲಿಂದ ಓಡಿ ಹೋಗಿದ್ದಾರೆ.




