September 20, 2024

ಉಪ್ಪಿನಂಗಡಿ: ಹಿಜಾಬ್ ವಿವಾದ: ವರದಿ ಮಾಡಲು ಹೋದ ಮೂವರು ಪತ್ರಕರ್ತರು ವಿರುದ್ಧ ಪ್ರಕರಣ ದಾಖಲು: ಪೊಲೀಸ್ ಇಲಾಖೆ ವಿರುದ್ಧ ವ್ಯಾಪಕ ಆಕ್ರೋಶ-ಪ್ರತಿಭಟನೆಗೆ ನಿರ್ಧಾರ

0

ಉಪ್ಪಿನಂಗಡಿ: ಕಳೆದ ಕೆಲ ದಿನಗಳಿಂದ ಸರಕಾರಿ ಕಾಲೇಜು ಬಹಳಷ್ಟು ಸದ್ದು ಮಾಡುತ್ತಿದ್ದು ಇದೀಗ ಇನ್ನೊಂದು ಬೆಳವಣಿಗೆಯಿಂದ ಸುದ್ದಿಯಾಗಿದೆ.

ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನಂತೆ ವರದಿಗಾರರಾದ ಅಜಿತ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ಸಿದ್ದೀಕ್ ನೀರಾಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜೂನ್ 2ರಂದು 9.30 ರ ಸುಮಾರಿಗೆ ಅಜಿತ್ ಕುಮಾರ್ ಎಂಬಾತ ವಿದ್ಯಾರ್ಥಿನಿಯ ಶಾಲನ್ನು ಎಳೆಯಲು ಪ್ರಯತ್ನಿಸಿದ್ದು, ಆಕೆ ತಪ್ಪಿಸಿಕೊಂಡಾಗ ಪ್ರವೀಣ್ ಕುಮಾರ್ ಎಂಬಾತ ಪ್ರಚೋದನೆ ನೀಡಿದ್ದಾನೆ. ಈ ವೇಳೆ ಅಜಿತ್ ಕುಮಾರ್ ವಿದ್ಯಾರ್ಥಿನಿಯ ವಿಡಿಯೋ ಮಾಡಿದ್ದು, ಇದನ್ನು ಪ್ರಶ್ನಿಸಿದಾಗ ‘ನಾಳೆಯಿಂದ ಹೇಗೆ ಕಾಲೇಜಿಗೆ ಬರುತ್ತೇವೆ ಎಂದು ನೋಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಈ ಬಗ್ಗೆ ಮೌಖಿಕ ದೂರು ನೀಡಿದ್ದು ಪ್ರಾಂಶುಪಾಲರು ಮೂವರನ್ನು ಕರೆದು ಅವರು ತೆಗೆದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಬಳಿಕ ಅವರೆಲ್ಲರೂ ಪತ್ರಕರ್ತರು ಎಂಬುದು ತಿಳಿಯಿತು ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ. ಪೊಲೀಸರು ಐಪಿಸಿ 447, 354, 504,606,34 ಸೆಕ್ಷನ್ ನಡಿ ಎಫ್ ಐಆರ್ ದಾಖಲಿಸಿದ್ದಾರೆ.

ಕಾಲೇಜಿನಲ್ಲಿ ನಡೆದ ಹಿಜಾಬ್ ಪ್ರಕರಣದ ವರದಿ ಸಂಗ್ರಹಿಸಲು ತೆರಳಿದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ನಡೆದ ಬೆನ್ನಲ್ಲೇ ಇದೀಗ ವಿದ್ಯಾರ್ಥಿನಿ ವರದಿಗೆ ತೆರಳಿದ ಮಾಧ್ಯಮದವರ ವಿರುದ್ಧವೇ ದೂರು ನೀಡಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ ಮಾಡಲು ತೆರಳಿದ ಪತ್ರಕರ್ತರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಪತ್ರಕರ್ತರು ಸೇರಿದಂತೆ ಹಲವಾರು ಖಂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದಲ್ಲದೇ ಈ ಬಗ್ಗೆ ದ.ಕ ಜಿಲ್ಲೆಯ ಪತ್ರಕರ್ತರು ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!