ಜೂನ್ 6ರಂದು ವಿಟ್ಲದಲ್ಲಿ ಲವ್ ಜಿಹಾದ್, ಮತಾಂತರ ವಿರುದ್ಧ ಹಿಂದೂ ಜಾಗೃತಿ ಸಮಾವೇಶ: ಪತ್ರಿಕಾಗೋಷ್ಠಿಯಲ್ಲಿ ವಿ.ಹಿಂ.ಪ. ಜಿಲ್ಲಾ ಅಧ್ಯಕ್ಷ ಡಾ. ಕೆ. ಪ್ರಸನ್ನ ಮಾಹಿತಿ
ವಿಟ್ಲ: ಹಿಂದು ಯುವತಿಯರನ್ನು ಲವ್ ಜಿಹಾದ್ ಮೂಲಕ ಮೋಸದ ಜಾಲಕ್ಕೆ ತಳ್ಳಿ ಜೀವನವನ್ನು ಹಾಳುವ ಮಾಡುವ ಕಾರ್ಯ ಮಾಡಲಾಗುತ್ತಿದೆ. ಹಿಂದೂ ಸಮಾಜ ಒಟ್ಟಾಗಿ ನಿಂತು ಇದನ್ನು ಖಂಡಿಸುವ ನಿಟ್ಟಿನಲ್ಲಿ ಜೂ.6ರಂದು ಬೆಳಗ್ಗೆ 10 ಘಂಟೆಗೆ ವಿಟ್ಲ ಸರ್ಕಾರಿ ಬಸ್ ನಿಲ್ದಾಣದ ಬಳಿ ಬೃಹತ್ ಹಿಂದೂ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿ.ಹಿಂ.ಪ. ಜಿಲ್ಲಾ ಅಧ್ಯಕ್ಷ ಡಾ. ಕೆ. ಪ್ರಸನ್ನ ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿವಾರ ಸಂಘಟನೆಗಳ ವತಿಯಿಂದ ಸಮಾಜಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 9ಗಂಟೆಗೆ ಪುತ್ತೂರು ರಸ್ತೆಯ ಜೈನ ಬಸದಿ ಬಳಿಯಿಂದ, ಕಲ್ಲಡ್ಕ ರಸ್ತೆ ಪೆಟ್ರೋಲ್ ಪಂಪ್ ಬಳಿಯಿಂದ, ಸಾಲೆತ್ತೂರು ರಸ್ತೆಯ ವಿಠಲ ಪದವಿ ಪೂರ್ವ ಕಾಲೇಜು ಬಳಿಯಿಂದ ಸರ್ಕಾರಿ ಬಸ್ ನಿಲ್ದಾಣದ ತನಕ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಮುಖಂಡರಾದ ಮುರಳಿ ಹಸಂತಡ್ಕ, ರಾಧಾಕೃಷ್ಣ ಅಡ್ಯಂತಾಯ, ಪತ್ರಕರ್ತೆ ತನ್ಮಯಿ ಪ್ರಮುಖವಾಗಿ ಭಾಗವಹಿಸಲಿದ್ದಾರೆ. ಸುಮಾರು 3ಸಾವಿರ ಜನರು ಸೇರುವ ನಿರೀಕ್ಷೆ ಇಟ್ಟಿದ್ದು, ರಾಷ್ಟ್ರ ಭಕ್ತ ಹಿಂದೂ ಬಂಧು ಭಗಿನಿಯರು ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು. ವಿವಿಧ ಸಂಘ ಸಂಸ್ಥೆಗಳ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದರು.
ವಿಹಿಂಪ ಜಿಲ್ಲಾ ಸಹ ಕಾರ್ಯದರ್ಶಿ ಗೋವರ್ಧನ್, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ, ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ ಉಪಸ್ಥಿತರಿದ್ದರು.