ಉಳ್ಳಾಲ: ಆಸ್ಪತ್ರೆ ಬಳಿ ನಿಲ್ಲಿಸಿದ್ದ ಬೈಕ್ ಕಳವು: ಇಬ್ಬರ ಬಂಧನ
ಉಳ್ಳಾಲ: ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಬೈಕ್ ಕಳವು ನಡೆಸಿದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬುಧವಾರ ಬಂಧಿಸಿ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಸರಗೋಡಿನ ಚೆರ್ಕಳ ನಿವಾಸಿ ಅಬ್ದುಲ್ ರಶೀದ್ (23) ಕುಂಜಾರುಪ್ಪಾರ ನಿವಾಸಿ ಅಬ್ದುಲ್ ಶಬೀರ್ (21) ಎಂದು ಗುರುತಿಸಲಾಗಿದೆ.
ಎ.25 ರಂದು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಬಗಂಬಿಲ ನಿವಾಸಿ ರಂಜಿತ್ ಎಂಬವರ ಎಫ್ ಝಡ್ ಬೈಕ್ ಕಳವು ನಡೆದಿದ್ದು, ಈ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜೂನ್ 1 ರಂದು ಉಚ್ಚಿಲ ಬ್ರಿಡ್ಜ್ ಬಳಿ ಉಳ್ಳಾಲ ಠಾಣಾ ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿರುವಾಗ ಸಂದರ್ಭದಲ್ಲಿ ಮುಂಭಾಗದಲ್ಲಿ ನಂಬರ್ ಪ್ಲೇಟ್ ಇಲ್ಲದೇ ಓಡಿಸುತ್ತಿದ್ದ ಬೈಕ್ ನ್ನು ಗಮನಿಸಿ ಸಂಶಯಗೊಂಡು ತಡೆದು ದಾಖಲೆಗಳ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದೆ.




