ಅಝಾನ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಗುಂಡು ಹಾರಿಸಿ ಪಾಲನೆ ಮಾಡಿಸುತ್ತೇನೆ: ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ: ಅಝಾನ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಗುಂಡು ಹಾರಿಸಿ ಪಾಲನೆ ಮಾಡಿಸುತ್ತೇನೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಮೈಕ್ ಗಳನ್ನು ತೆರುವುಗೊಳಿಸುವಂತೆ ಮಾಡಿರುವ ಸುಪ್ರಿಂ ಕೋರ್ಟ್ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಹಿಂದುತ್ವದ ಹೆಸರಿನಲ್ಲಿ ಆಯ್ಕೆಯಾಗಿರುವ ಬಿಜೆಪಿ ಶಾಸಕರು ಈ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರ ಮೇಲಿದ್ದ ಹಿಂದೂಗಳ ಭರವಸೆ ಕೂಡ ಹುಸಿಯಾಗಿದೆ. ಇವರಿಗೆ ತಕ್ಕ ಪಾಠ ಕಲಿಸಬೇಕು ಎನ್ನುವ ಕಾರಣಕ್ಕೆ ಎಲ್ಲಾ ಬಿಜೆಪಿ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಹಿಂದುತ್ವದ ಕೆಲಸ ಮಾಡಲು ಆಗದಿದ್ದರೆ ನನಗೆ ಅವಕಾಶ ಕೊಟ್ಟು ನೋಡಿ. ಗುಂಡು ಹಾರಿಸಿ ಪಾಲನೆ ಮಾಡಿಸುತ್ತೇನೆ. ಸುಪ್ರಿಂ ಕೋರ್ಟ್ ಆದೇಶ ಪಾಲನೆ ಮಾಡದ ಸರಕಾರ ಹಾಗೂ ಪಾಲನೆ ಮಾಡದವರ ಮೇಲೆ ಗುಂಡು ಹಾರಿಸಿಯಾದರೂ ಜಾರಿಗೆ ತರುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹಿಂದುತ್ವ ಹಾಗೂ ಅಭಿವೃದ್ಧಿಯಲ್ಲಿ ಶೇ.25 ರಷ್ಟಾದರೂ ಅಳವಡಿಸಿಕೊಳ್ಳಬೇಕು. ಹಿಂದೂಪರ ಕಾರ್ಯ ಮಾಡದಿದ್ದರೆ ಮುಂದಿನ ಚುನಾವಣೆ ಬಿಜೆಪಿಗೆ ಕಠಿಣವಾಗಲಿದೆ ಎಂದು ತಿಳಿಸಿದರು.
ಶಬ್ದ ಮಾಲಿನ್ಯ ಉಂಟು ಮಾಡುವ ಆಜಾನ್ ವಿರುದ್ದ ಕ್ರಮ ಕೈಗೊಳ್ಳುವಲ್ಲಿ ರಾಜ್ಯದ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ಇವರ ವೈಫಲ್ಯ ಖಂಡಿಸಿ ಜೂ.8 ರಂದು ರಾಜ್ಯದ ಎಲ್ಲಾ ಬಿಜೆಪಿ ಶಾಸಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.




