ಪುಂಜಾಲಕಟ್ಟೆ: ಕಾರಿಂಜೇಶ್ವರ ದೇವಸ್ಥಾನದ ಮೇಲ್ಭಾಗದಿಂದ ಉರುಳಿ ಬಿದ್ದ ಬೃಹತ್ ಬಂಡೆಕಲ್ಲು
ಪುಂಜಾಲಕಟ್ಟೆ: ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಮೇಲ್ಭಾಗದಿಂದ ಬೃಹತ್ ಬಂಡೆಕಲ್ಲೊಂದು ಉರುಳಿ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.
ಬಂಡೆಕಲ್ಲು ಉರುಳಿ ಬಿದ್ದ ರಭಸಕ್ಕೆ ಮರಗಳು ಮುರಿದು ಬಿದ್ದಿದ್ದು, ದೇವಸ್ಥಾನದ ರಥಬೀದಿಯಿಂದ ಕಾರಿಂಜಬೈಲ್ ಸಂಪರ್ಕಿಸುವ ರಸ್ತೆಗೆ ಬಂಡೆಕಲ್ಲು, ಮರ ಬಿದ್ದು ರಸ್ತೆ ತಡೆಯುಂಟಾಗಿತ್ತು.
ಅರಣ್ಯ ಇಲಾಖೆಯ ಸಿಬಂದಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ರಸ್ತೆಯಲ್ಲಿದ್ದ ಮರಗಳನ್ನು ತೆರವು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಗುಡ್ಡದಲ್ಲಿರುವ ಕೆಲವು ಮರಗಳಿಗೆ ಹಾನಿಯಾಗಿದೆ.
ಬೆಳಗ್ಗೆ ಸುಮಾರು 9 ಗಂಟೆಗೆ ಕಾರಿಂಜೇಶ್ವರನ ಸನ್ನಿಧಿಯ ಬಲ ಭಾಗದಲ್ಲಿದ್ದ ಬೃಹತ್ ಬಂಡೆ ಕಲ್ಲು ಕೆಳಗೆ ಉರುಳಿ ಕೊಂಡು ಬಂದು ರಸ್ತೆಯ ಬದಿಯಲ್ಲಿ ಸಿಲುಕಿಕೊಂಡು ನಿಂತಿದೆ.




