ಹಿಂಬದಿಯಿಂದ ಕ್ಯಾಬ್ ಢಿಕ್ಕಿ: 4 ವರ್ಷದ ಬಾಲಕ ಮೃತ್ಯು, ತಂದೆಗೆ ಗಾಯ
ಬೆಂಗಳೂರು: ವೇಗವಾಗಿ ಬಂದ ಕ್ಯಾಬ್’ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಬಾಲಕ ಮೃತಪಟ್ಟು, ತಂದೆ ಗಾಯಗೊಂಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತ ಬಾಲಕನನ್ನು ಅವಿನಾಶ್ (4), ಗಾಯಗೊಂಡ ಬಾಲಕನ ತಂದೆಯನ್ನು ಹನುಮಂತಪ್ಪ (32) ಎಂದು ಗುರ್ತಿಸಲಾಗಿದೆ.
ಹನುಮಂತಪ್ಪ ದಿನಗೂಲಿ ಕಾರ್ಮಿಕನಾಗಿದ್ದು, ಬಾಗಲಕೋಟೆ ಮೂಲದವರಾಗಿದ್ದಾರೆ. ಹನುಮಂತಪ್ಪ ಸೋಮಸುಂದರಪಾಳ್ಯದಲ್ಲಿ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ 8.30ರ ಸುಮಾರಿಗೆ ಪುತ್ರನೊಂದಿಗೆ ದಿನಸಿ ಸಾಮಾಗ್ರಿ ಖರೀದಿ ಮಾಡಲು ಹೊರಗೆ ಬಂದಿದ್ದಾರೆ.
ಗುರುಮೂರ್ತಿ ಟೆಂಪಲ್ ರಸ್ತೆಯಲ್ಲಿ ತಂದೆ ಹಾಗೂ ಪುತ್ರ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಹಿಂದಿನಿಂದ ಕಾರು ವೇಗವಾಗಿ ಬಂದು ಅಭಿಲಾಷ್’ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಭಿಲಾಷ್ ಹಾಗೂ ಹನುಮಂತಪ್ಪ ಅವರು ಗಾಯಗೊಂಡಿದ್ದಾರೆ.
ಕೂಡಲೇ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಬಾಲಕ ಮೃತಪಟಿದ್ದಾನೆ. ಹನುಮಂತಪ್ಪ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಈ ಸಂಬಂಧ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೊಳಪಡಿಸಿದ್ದಾರೆ.




