ಮುಸ್ಲಿಮರ ವ್ಯಾಪಾರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದ ಕೇರಳದ ಮಾಜಿ ಶಾಸಕನ ಬಂಧನ
ತಿರುವನಂತಪುರ: ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದ ಕೇರಳದ ಮಾಜಿ ಶಾಸಕ ಪಿ.ಸಿ.ಜಾರ್ಜ್(70) ಅವರನ್ನು ಭಾನುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಟ್ಟಾಯಂನ ಎರಟ್ಟುಪೆಟ್ಟದಲ್ಲಿರುವ ನಿವಾಸದಿಂದ ಜಾರ್ಜ್ ಅವರನ್ನು ಫೋರ್ಟ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾಷಣದಲ್ಲಿ ಧಾರ್ಮಿಕ ವೈಷಮ್ಯ ಹರಡುವ ಮಾತುಗಳನ್ನು ಆಡಿರುವ ಬಗ್ಗೆ ಜಾರ್ಜ್ ವಿರುದ್ಧ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದರು.
ಮುಸ್ಲಿಮರು ನಡೆಸುವ ರೆಸ್ಟೊರೆಂಟ್ಗಳಿಗೆ ತೆರಳದಂತೆ ಕೇರಳದ ಮುಸ್ಲಿಮೇತರ ಜನರಿಗೆ ಜಾರ್ಜ್ ಆಗ್ರಹಿಸಿದ್ದರು. ಮುಸ್ಲಿಮರು ನಡೆಸುವ ವ್ಯಾಪಾರಗಳನ್ನೂ ಬಹಿಷ್ಕರಿಸುವಂತೆ ಕರೆ ನೀಡಿದ್ದರು.
ಅನಂತಪುರಿ ಹಿಂದೂ ಮಹಾ ಸಮ್ಮೇಳನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ್ದ ಅವರು, ‘ಮುಸ್ಲಿಮರು ನಡೆಸುತ್ತಿರುವ ರೆಸ್ಟೊರೆಂಟ್ಗಳಲ್ಲಿ ನಿರ್ವೀಯಗೊಳಿಸುವಂತಹ ಅಂಶಗಳನ್ನು ಒಳಗೊಂಡಿರುವ ಟೀ ಮಾರಾಟ ಮಾಡಲಾಗುತ್ತಿದೆ. ಅದರಿಂದ ಜನರ ಸಂತಾನವೃದ್ಧಿ ಸಾಮರ್ಥ್ಯವನ್ನು ಕುಂದಿಸುವ ಮೂಲಕ ದೇಶದಲ್ಲಿ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಲಾಗಿದೆ’ ಎಂದು ಆರೋಪಿಸಿದ್ದರು.




