ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ ಬಿಜೆಪಿ ಸರಕಾರದ ಹಗರಣ- ಶಿಕ್ಷಣ ಸಚಿವರು ರಾಜಿನಾಮೆಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ
ಉಡುಪಿ: ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿತರಿಸುವ ಸಮವಸ್ತ್ರದಲ್ಲಿ ಬಹು ಕೋಟಿಯ ಹಗರಣ ಬೆಳಕಿಗೆ ಬಂದಿದ್ದು, ಇದು ಶಿಕ್ಷಣ ಸಚಿವರ ಕಮಿಷನ್ ದಂಧೆಯಾಗಿದೆ. ನಿರಂತರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬಿ.ಇ.ಒ ಕಛೇರಿ ಮುಂಭಾಗ ಪ್ರತಿಭಟನೆ ನಡೆಯಿತು.


ಆರ್ ಟಿ ಇ ಕಾಯ್ದೆಯಡಿ ಬರುವ ವಿದ್ಯಾರ್ಥಿಗಳಿಗೆ 2019 ರ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಲ್ಲಿ ಸರಕಾರವು ಹೊಲಿದ ಸಮವಸ್ತ್ರ ನೀಡಬೇಕೆಂದು ಹೇಳಿದೆ. ಈ ಹಿಂದೆ ಖಾಸಗಿ ಸಂಸ್ಥೆಗಳ ಮೂಲಕ ಸರಕಾರ ನೀಡಿದ್ದ ಟೆಂಡರ್ ಪ್ರಕಾರ ಕೇವಲ 230 ರೂ ಗೆ ಹೊಲಿದ ಎರಡು ಜೊತೆ ಸಮವಸ್ತ್ರ ಜೊತೆಗೆ ಶೂ, ಸೋಕ್ಸ್ ಹಾಗೂ ಟೈ ಕೂಡ ಎಸ್ ಡಿ ಎಂ ಸಿ ಮುಖಾಂತರ ವಿತರಣೆ ಮಾಡಲಾಗಿತ್ತು. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಉದ್ಯೋಗವಾಗುತ್ತಿದ್ದು ಆದರೆ ಇದೀಗ ಸರಕಾರವು ಎಸ್ ಡಿ ಎಂ ಸಿಯನ್ನು ಕಡೆಗಣಿಸಿ, ಕೇವಲ ಕಮಿಷನ್ ವ್ಯಾವೋಹದಿಂದ ಮಹಾರಾಷ್ಟ್ರ ಮೂಲದ ಕಂಪೆನಿಗೆ ಟೆಂಡರ್ ನೀಡಿ 250 ರೂ ಗಳಂತೆ ಹೊಲಿಯದ ಬಟ್ಟೆಯನ್ನು ನೀಡಲು ಮುಂದಾಗಿದೆ. ಈ ಮುಖಾಂತರ ಬಹು ಕೋಟಿಯ ಹಗರಣ ನಡೆದಿದೆ ಎಂದು ಅಂದಾಜಿಸಲಾಗಿದೆ.
ಶಿಕ್ಷಣ ಸಚಿವರು ಈ ಹಗರಣದ ಹಿಂದೆ ಕಮಿಷನ್ ದಂಧೆ ನಡೆಸುತ್ತಿದ್ದು ಉಚ್ಛ ನ್ಯಾಯಾಲಯದ ತೀರ್ಪನ್ನು ಕೂಡ ಪರಿಗಣಿಸದೆ ನ್ಯಾಯಾಲಯದ ನಿಂದನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ ಕಮಿಷನ್ ದಂಧೆ ನಡೆಸಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಶಿಕ್ಷಣ ಸಚಿವರು ಶೀಘ್ರ ರಾಜಿನಾಮೆ ನೀಡಬೇಕೆಂದು ಪ್ರತಿಭಟನೆಯನ್ನುದ್ದೇಶಿಸಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಮುಖಂಡರಾದ ನವಾಜ್ ಶೇಖ್ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿರುವ ನಿದಾ ಕೂಡ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಸಮಿತಿ ಸದಸ್ಯರು ಮತ್ತು ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿರುವ ಸಾದಿಕ್ ರವರು ಪ್ರತಿಭಟನಾ ಸಭೆಯನ್ನು ನಿರೂಪಿಸಿದರು.




