ಭದ್ರ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ಜೀಪ್ ಗಳ ರೇಸ್, ಮೋಜು ಮಸ್ತಿ: ಪ್ರಕರಣ ದಾಖಲು
ಬೆಂಗಳೂರು: ರಾಜ್ಯದಲ್ಲಿನ ಅರಣ್ಯಗಳು ಒತ್ತುದಾರರು ಮತ್ತು ಬೇಟೆಗಾರರಿಂದ ಮಾತ್ರ ಹಾನಿಯಾಗುತ್ತಿಲ್ಲ. ಅನಿಯಂತ್ರಿತ ಪ್ರವಾಸೋದ್ಯಮ ಚಟುವಟಿಕೆಗಳಿಂದಲೂ ಪೆಟ್ಟಾಗುತ್ತಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಬೇಗ ಖ್ಯಾತಿಯಾಗಬೇಕೆಂಬ ಹುಚ್ಚು ಹಚ್ಚಿಸಿಕೊಂಡ ಪುಂಡರಿಂದಲೂ ಅರಣ್ಯಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ.
ಭದ್ರ ಹುಲಿ ಸಂರಕ್ಷಿತ ವ್ಯಾಪ್ತಿಯ ಹಳ್ಳವೊಂದರಲ್ಲಿ ನೀರಿನ ಮಧ್ಯ ಎರಡು ಖಾಸಗಿ ಜೀಪ್ ಗಳು ರೇಸ್ ಮಾಡಿದ್ದು, ಬೇಕಾಬಿಟ್ಟಿಯಾಗಿ ವಾಹನದಲ್ಲಿ ಪುಂಡರು ಮೋಜು ಮಸ್ತಿ ಮಾಡಿದ್ದಾರೆ. ಭಾನುವಾರ ಸಂಜೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
ವಾರದ ಹಿಂದೆ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬೆ ವಲಯದಲ್ಲಿ ಈ ಘಟನೆ ನಡೆದಿರುವುದಾಗಿ ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಆದರೆ, ಅರಣ್ಯಾಧಿಕಾರಿಗಳು ಸೋಮವಾರ ಬೆಳಗ್ಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.




