ಹಿರೇಮಠದ ಬಾವಿಗೆ ಬಿದ್ದು ಅತಿಥಿ ಶಿಕ್ಷಕಿ ಮೃತ್ಯು
ಚಿತ್ತಾಪುರ: ತಾಲ್ಲೂಕಿನ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿರುವ ಬಾವಿಯಲ್ಲಿ ಬಿದ್ದು, ಶುಕ್ರವಾರ ಅತಿಥಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ.
ಭೂಮಿಕಾ ಶರಣಪ್ಪ ಊಡಗಿ (26) ಮೃತ ಶಿಕ್ಷಕಿ. ದಿಗ್ಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕಿ ಆಗಿದ್ದರು. ಭೂಮಿಕಾ ಅವರು, ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯರ ಆಪ್ತಸಹಾಯಕರಾಗಿ ಕೆಲಸ ಮಾಡುತ್ತಿದ್ದ ಶರಣಪ್ಪ ಊಡಗಿ ಎಂಬುವವರ ಪತ್ನಿ ಎಂದು ತಿಳಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಹೋದ ಭೂಮಿಕಾ ವಾಪಸ್ ಬರಲಿಲ್ಲ. ಅತ್ತ ಶಾಲೆಗೂ ಹೋಗಿರಲಿಲ್ಲ. ಈ ಬಗ್ಗೆ ಮನೆಯ ಅಕ್ಕಪಕ್ಕದವರನ್ನು ವಿಚಾರಿಸಿದಾಗ, ಮಠದ ಹತ್ತಿರ ಹೋಗಿರುವ ವಿಷಯ ತಿಳಿಯಿತು.
ಮಠದ ಆವರಣದಲ್ಲಿರುವ ಬಾವಿಯ ಬಳಿ ಅವರ ಚಪ್ಪಲಿಗಳು ಪತ್ತೆಯಾದವು. ಅಲ್ಲದೇ, ಬಾವಿಗೆ ಅಳವಡಿಡಿದ್ದ ತಂತಿ ಜಾಳಿಗೆ ಕೂಡ ತೆರೆದುಕೊಂಡಿತ್ತು. ಇದರಿಂದ ಅನುಮಾನಗೊಂಡು ಹುಡುಕಿದಾಗ, ಭೂಮಿಕಾ ಅವರ ಶವ ದೊರೆಯಿತು ಎಂದು ಚಿತ್ತಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ.




