ಸಿಮೆಂಟ್ ಲಾರಿಗಳ ನಡುವೆ ಭೀಕರ ಅಪಘಾತ: ಚಾಲಕ ಸಜೀವ ದಹನ
ಬೆಂಗಳೂರು: ಎರಡು ಸಿಮೆಂಟ್ ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಚಾಲಕನೊಬ್ಬ ಸಜೀವ ದಹನವಾಗಿರುವ ಘಟನೆ ದೇವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರ ಭುಕ್ತಿ ಡಾಬಾದ ಮುಂದೆ ನಡೆದಿದೆ.
ನಸುಕಿನ ವೇಳೆ ಭುಕ್ತಿ ಡಾಬಾ ಮುಂದೆ ಇದ್ದ ರಸ್ತೆ ವಿಭಜಕಕ್ಕೆ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸಿಮೆಂಟ್ ಹೊತ್ತಿದ್ದ ಲಾರಿವೊಂದು ರಭಸದಿಂದ ಡಿವೈಡರ್ಗೆ ಗುದ್ದಿದ ಪರಿಣಾಮ ಡಿವೈಡರ್ ದಾಟಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸಾಗುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸ್ಥಳಿಯರು ಒಬ್ಬ ಚಾಲಕನನ್ನು ರಕ್ಷಿಸಿದರು. ಮತ್ತೊಂದು ಲಾರಿ ಜಖಂ ಆದ ಹಿನ್ನೆಲೆಯಲ್ಲಿ ಚಾಲಕ ಹೊರಗೆ ಬರಲು ಆಗದೆ ಅದರಲ್ಲಿಯೇ ಸಿಲುಕಿ ಬೆಂಕಿಯಲ್ಲಿ ಜೀವಂತವಾಗಿ ಸುಟ್ಟು ಕರಕಲಾಗಿದ್ದಾರೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ.




