ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಮುಸ್ಲಿಮರ ಜೊತೆ ದೈನಂದಿನ ವ್ಯವಹಾರ ಮಾಡುವುದಿಲ್ಲ ಸುಳ್ಳು ಸುದ್ದಿ ವಿಚಾರ: ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಪುತ್ತೂರು: ಉಪ್ಪಿನಂಗಡಿಯಲ್ಲಿ ಮುಸ್ಲಿಮರ ಜೊತೆ ದೈನಂದಿನ ವ್ಯವಹಾರ ಮಾಡುವುದಿಲ್ಲ ಎಂಬ ವಾಟ್ಸಪ್ ಬರಹಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.
ಇಂದು ಬೆಳಗ್ಗೆಯಿಂದ ಉಪ್ಪಿನಂಗಡಿ ಪೇಟೆಯ 32 ಅಂಗಡಿಗಳ ಹೆಸರುಗಳಿರುವ ಒಕ್ಕಣೆಯ ಬರಹಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಾದಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಉಪ್ಪಿನಂಗಡಿಯ 32 ವರ್ತಕರು ಪುತ್ತೂರು ಡಿವೈಎಸ್ಪಿ ಗಾನಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ಉಪ್ಪಿನಂಗಡಿ ಸುವ್ಯ ಕ್ರೀ ಪಾರ್ಲರ್ ಮಾಲಕ ಯತೀಶ್ ಶೆಟ್ಟಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಯಾರೋ ದುಷ್ಕರ್ಮಿಗಳು ಯತೀಶ್ ಶೆಟ್ಟಿ ಮತ್ತು ಇತರ ಹಿಂದೂ ಸಮುದಾಯದ ಅಂಗಡಿಯ ಹೆಸರನ್ನು ಸಾಮಾಜಿಕ ಶಾಂತಿ ಭಂಗ ಮತ್ತು ಮತೀಯ ದ್ವೇಷ ಮೂಡಿಸುವ ರೀತಿಯಲ್ಲಿ “ನಮ್ಮ ಅಂಗಡಿಗಳಿಂದ ಯಾವುದೇ ಸಾಮಾಗ್ರಿಗಳನ್ನು ಮುಸ್ಲೀಂರಿಗೆ ಕೊಡುವುದಿಲ್ಲ, ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ” ಹಿಂದೂ ವರ್ತಕರ ಸಂಘ ಉಪ್ಪಿನಂಗಡಿ, ಎಂಬ ಸುಳ್ಳು ಸಂದೇಶವನ್ನು ಸೃಷ್ಠಿಸಿ ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ಹರಿಯಬಿಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.




